ನವದೆಹಲಿ: ಕಾನೂನುಗಳನ್ನು ಪಾಲಿಸದೆಯೇ ಭಾರತ ಮತ್ತು ವಿದೇಶದಿಂದ ಪ್ರಾಣಿಗಳನ್ನು ಪಡೆಯುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ರಚಿಸಿರುವ ವಿಶೇಷ ತನಿಖಾ ತಂಡದ (ಎಸ್ಐಟಿ) ತನಿಖೆಗೆ ಸಹಕಾರ ನೀಡುವುದಾಗಿ ಲಯನ್ಸ್ ಫೌಂಡೇಷನ್ನ ವನ್ಯಜೀವಿ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರ ವಂತಾರ ತಿಳಿಸಿದೆ.
ಈ ಪ್ರಕರಣದ ಕುರಿತ ತನಿಖೆಗೆ ಸುಪ್ರೀಂ ಕೋರ್ಟ್ ಎಸ್ಐಟಿ ರಚಿಸಿದೆ. ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್ ಮತ್ತು ಪಿ.ಬಿ ವರಾಳೆ ಅವರಿದ್ದ ಪೀಠವು ವಂತಾರದ ವಿರುದ್ದದ ಆರೋಪಗಳ ಕುರಿತ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿ ಜೆ. ಚೆಲಮೇಶ್ವರ್ ನೇತೃತ್ವದಲ್ಲಿ ನಾಲ್ವರನ್ನೊಳಗೊಂಡ ಎಸ್ಐಟಿಯನ್ನು ಸೋಮವಾರ ರಚಿಸಿತ್ತು.
‘ಸುಪ್ರೀಂ ಕೋರ್ಟ್ನ ಆದೇಶವನ್ನು ಗೌರವಿಸುತ್ತೇವೆ. ವಂತಾರವು ಪಾರದರ್ಶಕತೆ, ಸಹಾನುಭೂತಿ ಮತ್ತು ಕಾನೂನಿನ ಪಾಲನೆಗೆ ಬದ್ಧವಾಗಿದೆ’ ಎಂದು ವಂತಾರ ಪ್ರಕಟಣೆ ನೀಡಿದೆ.
ಮಾಧ್ಯಮ ಮತ್ತು ಸಾಮಾಜಿಕ ಜಾಲಾತಾಣಗಳಲ್ಲಿನ ವರದಿ ಹಾಗೂ ಎನ್ಜಿಒಗಳು ಮತ್ತು ವನ್ಯಜೀವಿ ಸಂರಕ್ಷಣಾ ಸಂಸ್ಥೆಗಳು ನೀಡಿನ ದೂರುಗಳ ಆಧಾರದಲ್ಲಿ ಸಲ್ಲಿಕೆಯಾದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿದ ನ್ಯಾಯಾಲಯ ಎಸ್ಐಟಿಯನ್ನು ರಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.