ADVERTISEMENT

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 200 ಸ್ಥಾನ ಗೆಲ್ಲುತ್ತೇವೆ: ಏಕನಾಥ ಶಿಂಧೆ

ಮೃತ್ಯುಂಜಯ ಬೋಸ್
Published 4 ಜುಲೈ 2022, 14:16 IST
Last Updated 4 ಜುಲೈ 2022, 14:16 IST
ಏಕನಾಥ ಶಿಂಧೆ
ಏಕನಾಥ ಶಿಂಧೆ   

ಮುಂಬೈ: ಮಹಾರಾಷ್ಟ್ರದಲ್ಲಿ ಜನಪರ ಸರ್ಕಾರ ರಚಿಸಲಿದ್ದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹಿಂದುತ್ವ ಹಾಗೂ ಅಭಿವೃದ್ಧಿಯ ಅಜೆಂಡಾದೊಂದಿಗೆ 200 ಸ್ಥಾನಗಳನ್ನು ಗೆಲ್ಲಲಿದ್ದೇವೆ ಎಂದು ಮುಖ್ಯಮಂತ್ರಿ ಏಕನಾಥ ಶಿಂಧೆ ಸೋಮವಾರ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ನೇತೃತ್ವದ ನೂತನ ಸರ್ಕಾರವು ಸೋಮವಾರ ವಿಶ್ವಾಸಮತವನ್ನು ಸಾಬೀತುಪಡಿಸಿದೆ. ಬಳಿಕ ಸುಮಾರು ಒಂದು ಗಂಟೆ ಕಾಲ ಸದನವನ್ನು ಉದ್ದೇಶಿಸಿ ಮಾತನಾಡಿದ ಅವರು ಭಾವನಾತ್ಮಕವಾಗಿ ಹಲವು ವಿಚಾರಗಳ ಬಗ್ಗೆ ಪ್ರಸ್ತಾಪಿಸಿದರು.

'ನಾವು ದೇಶದ್ರೋಹಿಗಳಲ್ಲ, ಶಿವಸೈನಿಕರು. ಬಾಳಾಸಾಹೇಬ್ ಠಾಕ್ರೆ ಮತ್ತು ಆನಂದ್ ದಿಘೆ ಅವರು ನಮ್ಮ ದೇವರು. ನನ್ನ ಇಡೀ ಬದುಕನ್ನೇ ಶಿವಸೇನಾಗೆ ಮುಡಿಪಾಗಿಟ್ಟಿದ್ದೇನೆ. ನಾನು ಶಿವಸೈನಿಕನಾಗಿದ್ದೆ, ಶಿವಸೈನಿಕನಾಗಿದ್ದೇನೆ ಮತ್ತು ಶಿವಸೈನಿಕನಾಗಿ ಇರುತ್ತೇನೆ' ಎಂದು ಹೇಳಿದರು.

'ನಾವು ದ್ರೋಹ ಎಸಗಿಲ್ಲ. ಹಿಂದುತ್ವ ಮತ್ತು ಅಭಿವೃದ್ಧಿ ಪರ ಇದ್ದೇವೆ. ಅದೇ ಅಜೆಂಡಾದೊಂದಿಗೆ ಮುಂದೆ ಸಾಗಲಿದ್ದೇವೆ' ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ನೇರ ಸಂದೇಶ ರವಾನಿಸಿದರು.

'ನಾವು ಜನಪರ ಸರ್ಕಾರವನ್ನು ರಚಿಸಲಿದ್ದೇವೆ. ತಮ್ಮ ನೇತೃತ್ವದ ಶಿವಸೇನಾದ ಗುಂಪು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು 2024ರ ವಿಧಾನಸಭೆ ಚುನಾವಣೆಯಲ್ಲಿ ಜಂಟಿಯಾಗಿ 200 ಸ್ಥಾನಗಳನ್ನು ಗೆಲ್ಲಲಿದ್ದೇವೆ' ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

'ಇದು ಸಾಧ್ಯವಾಗದಿದ್ದಲ್ಲಿ ಹಳ್ಳಿಗೆ ಹೋಗಿ ಕೃಷಿ ಮಾಡುತ್ತೇನೆ. ನಾನೊಬ್ಬ ಸಾಮಾನ್ಯ ಸೈನಿಕ. ಸಾಮಾನ್ಯ ಕಾರ್ಯಕರ್ತ. ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ. ನಾನೇ ಸಿಎಂ ಎಂಬುದರಲ್ಲಿ ನಂಬಿಕೆಯಿಲ್ಲ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.