ADVERTISEMENT

ಮಹಾತ್ಮ ಗಾಂಧಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕಾಳಿಚರಣ್ ಬಿಡುಗಡೆಗೆ ಒತ್ತಾಯ

ಓವೈಸಿ ಬಂಧಿಸಿದರೆ ಪೊಲೀಸರಿಗೆ ₹ 22 ಲಕ್ಷ ಬಹುಮಾನ ಘೋಷಿಸಿದ ಬಲಪಂಥೀಯ ಸಂಘಟನೆಗಳು

ಪಿಟಿಐ
Published 1 ಜನವರಿ 2022, 6:26 IST
Last Updated 1 ಜನವರಿ 2022, 6:26 IST
ಧಾರ್ಮಿಕ ಮುಖಂಡ ಕಾಳಿಚರಣ್‌ ಮಹಾರಾಜ್‌
ಧಾರ್ಮಿಕ ಮುಖಂಡ ಕಾಳಿಚರಣ್‌ ಮಹಾರಾಜ್‌   

ಗುರುಗ್ರಾಮ: ಹಿಂದೂ ಧಾರ್ಮಿಕ ಮುಖಂಡ ಕಾಳಿಚರಣ್ ಮಹಾರಾಜ್ ಅವರ ಬಿಡುಗಡೆಗೆ ಒತ್ತಾಯಿಸಿ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ಗುರುಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾತನಾಡಿದ ಹಿಂದೂ ಮುಖಂಡ ಮತ್ತು ವಕೀಲ ಕುಲಭೂಷಣ್ ಭಾರದ್ವಾಜ್, ‘ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿದೆ. ಸಂತ ಕಾಳಿಚರಣ್ ಅವರನ್ನು ನಿರ್ದಿಷ್ಟ ಕಾರ್ಯಸೂಚಿಯ ಕಾರಣಕ್ಕಾಗಿ ಬಂಧಿಸಲಾಯಿತು. ಪೊಲೀಸರು ಮತ್ತು ಸರ್ಕಾರ ಓವೈಸಿಯನ್ನು ಏಕೆ ಬಂಧಿಸಿಲ್ಲ? ಓವೈಸಿಯನ್ನು ಬಂಧಿಸುವ ಪೊಲೀಸ್ ಅಧಿಕಾರಿಗೆ ₹ 22 ಲಕ್ಷ ನಗದು ಬಹುಮಾನ ನೀಡಲಾಗುವುದು’ ಎಂದು ಘೋಷಿಸಿದ್ದಾರೆ.

‘ಇತ್ತೀಚೆಗೆ, ಹೈದರಾಬಾದ್ ಸಂಸದ ಓವೈಸಿ ಅವರ ಭಾಷಣದ ದಿನಾಂಕವಿಲ್ಲದ ವಿಡಿಯೊ ಕ್ಲಿಪ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಭಾಷಣದ ವೇಳೆ ಅವರು ಹಿಂದೂಗಳಿಗೆ ಬೆದರಿಕೆ ಹಾಕಿದ್ದಾರೆ’ ಎಂದೂ ಹಲವು ಬಲಪಂಥೀಯ ಕಾರ್ಯಕರ್ತರು ಆರೋಪಿಸಿದ್ದಾರೆ.

ADVERTISEMENT

ಇಲ್ಲಿನ ಜಿಲ್ಲಾಧಿಕಾರಿ ನಿವಾಸದ ಎದುರಿನ ಟ್ಯಾಂಕ್ ಪಾರ್ಕ್‌ನಲ್ಲಿ ಜಮಾಯಿಸಿದ ಪ್ರತಿಭಟನನಿರತರು, ಕಾಳಿಚರಣ್ ಅವರನ್ನು ಬಿಡುಗಡೆ ಮಾಡಬೇಕು ಮತ್ತು ಓವೈಸಿಯನ್ನು ಬಂಧಿಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗುತ್ತಾ ಮಿನಿ ಸೆಕ್ರೆಟರಿಯೇಟ್‌ವರೆಗೆ ಮೆರವಣಿಗೆ ನಡೆಸಿದರು. ನಂತರ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.