ADVERTISEMENT

ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್‌ ಪರೇಡ್‌; ಸರ್ಕಾರಕ್ಕೆ ರೈತರ ಎಚ್ಚರಿಕೆ

ಪಿಟಿಐ
Published 2 ಜನವರಿ 2021, 19:32 IST
Last Updated 2 ಜನವರಿ 2021, 19:32 IST
ಸಿಂಘು ಗಡಿಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತರೊಬ್ಬರು, ವಿಪರೀತ ಚಳಿಯಿಂದಾಗಿ ಶನಿವಾರ ಅಸ್ವಸ್ಥಗೊಂಡರು. ಅವರನ್ನು ಇತರ ರೈತರು ಚಿಕಿತ್ಸೆಗಾಗಿ ಕರೆದೊಯ್ದರು –ಪಿಟಿಐ ಚಿತ್ರ
ಸಿಂಘು ಗಡಿಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತರೊಬ್ಬರು, ವಿಪರೀತ ಚಳಿಯಿಂದಾಗಿ ಶನಿವಾರ ಅಸ್ವಸ್ಥಗೊಂಡರು. ಅವರನ್ನು ಇತರ ರೈತರು ಚಿಕಿತ್ಸೆಗಾಗಿ ಕರೆದೊಯ್ದರು –ಪಿಟಿಐ ಚಿತ್ರ   

ನವದೆಹಲಿ: ‘ನಮ್ಮ ಬೇಡಿಕೆಗಳು ಈಡೇರದಿದ್ದಲ್ಲಿ ಗಣರಾಜ್ಯೋತ್ಸವದಂದು (ಜ.26) ದೆಹಲಿಯಲ್ಲಿ ಟ್ರ್ಯಾಕ್ಟರ್‌ ರ್‍ಯಾಲಿ ನಡೆಸುತ್ತೇವೆ’ ಎಂದು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ (ಜ.4) ರೈತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸರ್ಕಾರದ ನಡುವೆ ಏಳನೇ ಸುತ್ತಿನ ಮಾತುಕತೆ ನಿಗದಿಯಾಗಿದೆ. ಇದಕ್ಕೂ ಪೂರ್ವದಲ್ಲಿ ರೈತರು ಸರ್ಕಾರದ ವಿರುದ್ಧ ಕಠಿಣ ನಿಲುವು ಕೈಗೊಳ್ಳುವ ಸೂಚನೆ ನೀಡಿದ್ದಾರೆ.

‘ಬೇಡಿಕೆಗಳನ್ನು ಈಡೇರಿಸದಿದ್ದರೆ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳ ಬೇಕಾದ ಸಮಯ ಬಂದಿದೆ. ಉದ್ದೇಶಿತ ರ್‍ಯಾಲಿಯನ್ನು ‘ಕಿಸಾನ್‌ ಪರೇಡ್‌’ ಎಂದು ಕರೆಯಲಿದ್ದೇವೆ. ಗಣರಾಜ್ಯೋ ತ್ಸವ ಪರೇಡ್‌ನ ನಂತರ ಕಿಸಾನ್‌ ಪರೇಡ್‌ ನಡೆಸಲಾಗುವುದು. ಗಣರಾಜ್ಯೋತ್ಸವವು ‘ಜನಶಕ್ತಿಯ’ ಸಂಕೇತ. ಅದಕ್ಕಾಗಿಯೇ ಕಿಸಾನ್‌ ಪರೇಡ್‌ಗೆ ಆ ದಿನವನ್ನು ಆಯ್ಕೆ ಮಾಡಿಕೊಂಡಿದ್ದೇವೆ’ ಎಂದು ರೈತ ಮುಖಂಡ ದರ್ಶನ್‌ಪಾಲ್‌ ಸಿಂಗ್‌ ಶನಿವಾರ ಮಾಧ್ಯಮ ಗೋಷ್ಠಿ ಯಲ್ಲಿ ತಿಳಿಸಿದರು.

ADVERTISEMENT

‘ಸೋಮವಾರದ ಸಭೆಯ ಬಗ್ಗೆ ರೈತರಲ್ಲಿ ಹಲವು ನಿರೀಕ್ಷೆಗಳಿವೆ. ಆದರೆ, ನಮ್ಮ ಅನುಭವದ ಆಧಾರದಲ್ಲಿ ಹೇಳುವುದಾದರೆ ಸರ್ಕಾರದ ಮೇಲೆ ನಮಗೆ ಭರವಸೆ ಇಲ್ಲ. ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು ಅಥವಾ ಬಲಪ್ರಯೋಗದಿಂದ ನಮ್ಮನ್ನು ಇಲ್ಲಿಂದ ಖಾಲಿ ಮಾಡಿಸಬೇಕ ಎಂದು ಸರ್ಕಾರಕ್ಕೆ ನಾವು ಎರಡು ಆಯ್ಕೆಗಳನ್ನು ಕೊಟ್ಟಿದ್ದೇವೆ.ಎಂದು ಸಂಘಟನೆಯ ನಾಯಕರು ಹೇಳಿದ್ದಾರೆ.

‘ಸಾವಿರಾರು ರೈತರು ಟ್ರ್ಯಾಕ್ಟರ್‌ಗಳಲ್ಲಿ ರಾಷ್ಟ್ರಧ್ವಜವನ್ನು ಅಳವಡಿಸಿಕೊಂಡು ಪರೇಡ್‌ನಲ್ಲಿ ಪಾಲ್ಗೊಳ್ಳುವರು. ಪರೇಡ್‌ನ ಮಾರ್ಗ ಹಾಗೂ ಇತರ ವಿವರಗಳನ್ನು ಶೀಘ್ರದಲ್ಲೇ ತಿಳಿಸಲಾಗುವುದು’ ಎಂದು ದರ್ಶನ್‌ಪಾಲ್‌ ಸಿಂಗ್‌ ಹೇಳಿದ್ದಾರೆ.

‘ಮನೇಸರ್‌– ಪಲ್ವಾಲ್‌ ಹೆದ್ದಾರಿ ಯಲ್ಲಿ ಜ.6ರಂದು ನಡೆಸಲು ಉದ್ದೇಶಿ ದಿರುವ ರ್‍ಯಾಲಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಅದನ್ನು ಕಿಸಾನ್‌ ಪರೇಡ್‌ನ ಪೂರ್ವಾಭ್ಯಾಸ ಎಂದು ಪರಿಗಣಿಸಲಾಗುವುದು’ ಎಂದು ಅವರು ಹೇಳಿದರು.

*
ರೈತರ ಬೇಡಿಕೆಗಳಲ್ಲಿ ಶೇ 50ರಷ್ಟನ್ನು ಈಡೇರಿಸಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಇದು ಶುದ್ಧ ಸುಳ್ಳು. ಲಿಖಿತವಾಗಿ ಈವರೆಗೆ ನಮಗೆ ಏನನ್ನೂ ಸರ್ಕಾರ ಕೊಟ್ಟಿಲ್ಲ.
-ಯೋಗೇಂದ್ರ ಯಾದವ್‌,ಸ್ವರಾಜ್‌ ಇಂಡಿಯಾದ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.