ADVERTISEMENT

ಲಂಡನ್‌ನಿಂದ ಭಾರತಕ್ಕೆ ಕೆಲವೇ ದಿನಗಳಲ್ಲಿ ವಾಪಸು ಬರುತ್ತೇನೆ: ಆದಾರ್ ಪೂನಾವಾಲಾ

ಪಿಟಿಐ
Published 2 ಮೇ 2021, 10:37 IST
Last Updated 2 ಮೇ 2021, 10:37 IST
ಆದಾರ್ ಪೂನಾವಾಲಾ
ಆದಾರ್ ಪೂನಾವಾಲಾ   

ಮುಂಬೈ: ‘ಲಂಡನ್‌ನಿಂದ ಭಾರತಕ್ಕೆ ಕೆಲವೇ ದಿನಗಳಲ್ಲಿ ವಾಪಸು ಬರುತ್ತೇನೆ’ ಎಂದು ಕೊವಿಶೀಲ್ಡ್‌ ಲಸಿಕೆ ಉತ್ಪಾದಿಸುವ ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ನ ಸಿಇಒ ಆದಾರ್ ಪೂನಾವಾಲಾ ಹೇಳಿದ್ದಾರೆ.

ಲಸಿಕೆ ಉತ್ಪಾದನೆ ಕುರಿತಂತೆ ಇರುವ ತೀವ್ರ ಒತ್ತಡ ಕುರಿತ ಮಾತುಗಳ ಹಿಂದೆಯೇ ಅವರು ಈ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಕೋವಿಡ್‌ ಸೋಂಕು ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿದ್ದಂತೆ ಲಸಿಕೆಗೂ ತೀವ್ರತರದ ಬೇಡಿಕೆ ಕಂಡುಬಂದಿದೆ.

"ಬ್ರಿಟನ್‌ನಲ್ಲಿನ ನನ್ನ ಎಲ್ಲ ಭಾಗಿದಾರರು, ಪಾಲುದಾರರ ಜೊತೆಗೆ ವಿಸ್ತೃತವಾದ ಚರ್ಚೆ ನಡೆಸಿದ್ದೇನೆ. ಪುಣೆಯಲ್ಲಿ ಕೋವಿಶೀಲ್ಡ್‌ ಲಸಿಕೆ ಉತ್ಪಾದನೆ ತ್ವರಿತಗತಿಯಲ್ಲಿ ನಡೆಯುತ್ತಿದೆ ಎಂದು ತಿಳಿಸಲು ಹರ್ಷಿಸುತ್ತೇನೆ. ಕೆಲವೇ ದಿನಗಳಲ್ಲಿ ದೇಶಕ್ಕೆ ಮರಳಲಿದ್ದು, ಸಂಸ್ಥೆಯ ಕಾರ್ಯ ಚಟುವಟಿಕೆಯನ್ನು ಪರಿಶೀಲಿಸುತ್ತೇನೆ' ಎಂದು ಅವರು ಮಧ್ಯರಾತ್ರಿ ಟ್ವೀಟ್ ಮಾಡಿದ್ದಾರೆ.

ADVERTISEMENT

ಈ ವಾರದ ಆರಂಭದಲ್ಲಿ ಭಾರತ ಸರ್ಕಾರ ಪೂನಾವಾಲಾ ಅವರಿಗೆ ವೈ ಶ್ರೇಣಿಯ ಭದ್ರತೆಯನ್ನು ಒದಗಿಸಿತ್ತು. ದ ಟೈಮ್ಸ್‌ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ, ಭಾರತದಲ್ಲಿ ನನಗೆ ಕೆಲವು ಪ್ರಭಾವಿಗಳಿಗೆ ತೀವ್ರ ಒತ್ತಡ ಬರುತ್ತಿದೆ ಎಂದು ಹೇಳಿಕೊಂಡಿದ್ದರು. ಇದೇ ಒತ್ತಡದಿಂದಾಗಿ ಪತ್ನಿ, ಮಕ್ಕಳ ಜೊತೆಗೆ ಅವರು ಲಂಡನ್‌ಗೆ ತೆರಳಿದ್ದಾಗಿಯೂ ತಿಳಿಸಿದ್ದರು.

‘ಅಂತಹ ಪರಿಸ್ಥಿತಿಗೆ ಮರಳಲು ಬಯಸದೇ ತಕ್ಷಣಕ್ಕೆ ಇಲ್ಲಿ ನನ್ನ ವಾಸ್ತವ್ಯದ ಅವಧಿಯನ್ನು ವಿಸ್ತರಿಸಿದ್ದೇನೆ. ಎಲ್ಲ ಭಾರವು ನನ್ನ ಮೇಲಿದೆ. ಆದರೆ, ಒಬ್ಬನೇ ನಿಭಾಯಿಸಲಾಗದು. ಇಂಥ ಸ್ಥಿತಿಯಲ್ಲಿ ಅಲ್ಲಿರಲು ಬಯಸುವುದಿಲ್ಲ. ಕೆಲವರಿಗೆ ಲಸಿಕೆ ಒದಗಿಸಲು ಆಗುತ್ತಿಲ್ಲ ಎಂದರೆ, ಅವರು ಏನೆಲ್ಲಾ ಮಾಡಬಹುದು ಎಂದು ಊಹಿಸಿಕೊಳ್ಳಿ’ ಎಂದೂ ಸಂದರ್ಶನಲ್ಲಿ ಹೇಳಿಕೊಂಡಿದ್ದರು.

‘ಸಂಭವನೀಯ ಬೆದರಿಕೆ ಕಾರಣ ಪೂನಾವಾಲಾ ಅವರಿಗೆ ಭದ್ರತೆ ನೀಡಿದ್ದು, ಸಿಆರ್‌ಪಿಎಫ್‌ನ ಶಸ್ತ್ರಸಜ್ಜಿತ ಸಿಬ್ಬಂದಿ ಒದಗಿಸಲಾಗಿತ್ತು. ವೈ ಶ್ರೇಣಿ ಭದ್ರತೆಯಡಿ 4–5 ಕಮ್ಯಾಂಡೊಗಳನ್ನು ನೀಡಲಾಗುತ್ತದೆ’ ಎಂದು ಮೂಲಗಳು ತಿಳಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.