ADVERTISEMENT

ಉದ್ಯೋಗದ ಭರವಸೆ ಈಡೇರಿಸಲು ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸುತ್ತಾರೆಯೇ: ನಿತೀಶ್

’ಮಹಾಘಟಬಂಧನ್’ ತೇಜಸ್ವಿ ಯಾದವ್‌ಗೆ ಬಿಹಾರ ಸಿಂಎ ನಿತೀಶ್ ಕುಮಾರ್ ಪ್ರಶ್ನೆ

ಪಿಟಿಐ
Published 2 ನವೆಂಬರ್ 2020, 6:25 IST
Last Updated 2 ನವೆಂಬರ್ 2020, 6:25 IST
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (ಪ್ರಾತಿನಿಧಿಕ ಚಿತ್ರ)
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (ಪ್ರಾತಿನಿಧಿಕ ಚಿತ್ರ)   

ಪಟನಾ:‘ರಾಜ್ಯದಲ್ಲಿ ಹತ್ತು ಲಕ್ಷ ಸರ್ಕಾರಿ ಉದ್ಯೋಗಗಳ ಸೃಷ್ಟಿಗೆ ವಾರ್ಷಿಕವಾಗಿ ₹1.44 ಲಕ್ಷ ಕೋಟಿ ವೆಚ್ಚವಾಗಲಿದ್ದು, ಆರ್‌ಜೆಡಿ ಮುಖಂಡ ತೇಜಸ್ವಿಯಾದವ್ಇಷ್ಟು ಹಣವನ್ನು ಎಲ್ಲಿಂದ ತರುತ್ತಾರೆ. ಈ ಭರವಸೆ ಈಡೇರಿಸಲು ರಾಜ್ಯದಲ್ಲಿ ಬೇರೆ ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸುತ್ತಾರೋ ಅಥವಾ ವೇತನ ನೀಡುವುದನ್ನೂ ವಿಳಂಬ ಮಾಡುತ್ತಾರೋ’ ಎಂದು ಬಿಹಾರ ಮುಖ್ಯಮಂತ್ರಿ ಹಾಗೂ ಜೆಡಿಯು ನಾಯಕ ನಿತೀಶ್ ಕುಮಾರ್ ಪ್ರಶ್ನಿಸಿದ್ದಾರೆ.

’ಮಹಾಘಟಬಂಧನ್‌’ಗೆ ಮತ ಚಲಾಯಿಸಿ ಗೆಲ್ಲಿಸಿದರೆ, ತಮ್ಮ ಮೊದಲ ಸಚಿವ ಸಂಪುಟ ಸಭೆಯಲ್ಲಿ 10 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಮಂಜೂರು ಮಾಡುವುದಾಗಿ ತೇಜಸ್ವಿ ಯಾದವ್ ನೀಡಿದ ಭರವಸೆ ಕುರಿತು ನಿತೀಶ್ ಕುಮಾರ್ ಈ ರೀತಿ ಪ್ರಶ್ನಿಸಿದ್ದಾರೆ.

ಐದು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಎರಡನೇ ಹಂತದ ಚುನಾವಣೆಗಾಗಿ ನಡೆದ 'ನಿಶ್ಚಯ್‌ ಸಂವಾದ್' ಎಂಬ ವರ್ಚುವಲ್ ರ‍್ಯಾಲಿ ಮೂಲಕ ಮಾತನಾಡಿದ ನಿತೀಶ್ ಕುಮಾರ್, ’ತಮ್ಮ ಸರ್ಕಾರವು ರಾಜ್ಯದ ಕೈಗಾರಿಕಾ ನೀತಿಯನ್ನು ಬದಲಾಯಿಸಿದ್ದು, ಇದರಿಂದ ಹಲವಾರು ಕೈಗಾರಿಕೆಗಳನ್ನು ಸ್ಥಾಪನೆಗೆ ಆಹ್ವಾನಿಸಲು ಸಾಧ್ಯವಾಗಿದೆ’ ಎಂದು ಹೇಳಿದರು.

ADVERTISEMENT

’ತೇಜಸ್ವಿ ಅವರಿಗೆ ಅಷ್ಟು ಪ್ರಮಾಣದಲ್ಲಿ ಸರ್ಕಾರಿ ಉದ್ಯೋಗ ಸೃಷ್ಟಿ ಅಸಾಧ್ಯ. ಹಾಗೆಯೇ ಅವರಿಗೆ ಆಡಳಿತ ನಡೆಸಲು ಅವಕಾಶವೂ ಸಿಗುವುದಿಲ್ಲ’ ಎಂದು ನಿತೀಶ್ ಕುಮಾರ್ ಹೇಳಿದರು. ’ಆದರೆ ಅವರು ಹೇಳಿದಂತೆ ಉದ್ಯೋಗ ಸೃಷ್ಟಿಸುವುದಾದರೆ, ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕವಾಗಿ ₹1.44 ಲಕ್ಷ ಕೋಟಿ ವೆಚ್ಚವಾಗುತ್ತದೆ. ಇದರಿಂದ ಇತರೆ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಕೈಬಿಡುತ್ತಾರೆಯೇ’ ಎಂದು ಪ್ರಶ್ನಿಸಿದ್ದಾರೆ.

’ಈ ಮೊದಲು ಸರ್ಕಾರಿ ಅಧಿಕಾರಿಗಳು ಯಾರೂ ಸಮಯಕ್ಕೆ ಸರಿಯಾಗಿ ಸಂಬಳ ಪಡೆಯುತ್ತಿರಲಿಲ್ಲ. ’2005ರಲ್ಲಿ ತಮಗೆ ಸರಿಯಾದ ಸಮಯಕ್ಕೆ ವೇತನ ಸಿಗುತ್ತಿರಲಿಲ್ಲ ಎಂದು ಶಿಕ್ಷಕರು ಮತ್ತು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ’ವಿಕಾಸ ಯಾತ್ರೆ’ ಸಂದರ್ಭದಲ್ಲಿ ತಮಗೆ ತಿಳಿಸಿದ್ದಾಗಿ’ ನಿತೀಶ್ ಕುಮಾರ್ ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.