ADVERTISEMENT

ಕಾರಿಗೆ ಬೆಂಕಿ: ಮಹಿಳೆ, ಇಬ್ಬರು ಪುತ್ರಿಯರು ದಹನ

ಅಪ್ಪ, ಒಬ್ಬಳು ಮಗಳು ಪಾರು

ಏಜೆನ್ಸೀಸ್
Published 11 ಮಾರ್ಚ್ 2019, 3:01 IST
Last Updated 11 ಮಾರ್ಚ್ 2019, 3:01 IST
   

ನವದೆಹಲಿ: ಅಕ್ಷರಧಾಮ ದೇವಾಲಯದ ಕಡೆಗೆ ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣದಲ್ಲಿಯೇ ಹೊತ್ತು ಉರಿದ ಪರಿಣಾಮ 35 ವರ್ಷ ವಯಸ್ಸಿನ ಮಹಿಳೆ ಹಾಗೂ ಅವರ ಇಬ್ಬರು ಪುತ್ರಿಯರು ಜೀವಂತ ದಹನರಾಗಿದ್ದಾರೆ.

ಭಾನುವಾರ ಸಂಜೆ ಪೂರ್ವ ದೆಹಲಿಯ ಅಕ್ಷರಧಾಮ ಫ್ಲೈ ಓವರ್‌ನಲ್ಲಿ ಈ ಅನಾಹುತ ಸಂಭವಿಸಿದೆ. ಡಾಟ್ಸನ್‌ ಗೋ ಕಾರಿನಲ್ಲಿ ಮೂವರು ಮಕ್ಕಳನ್ನು ಒಳಗೊಂಡ ಕುಟುಂಬ ಪ್ರಯಾಣಿಸುತ್ತಿತ್ತು. ಪ್ರಾಥಮಿಕ ಮಾಹಿತಿ ಪ್ರಕಾರ, ಕಾರಿನ ಹಿಂಬದಿಯ ಗ್ಯಾಸ್‌(ಸಿಎನ್‌ಜಿ) ಸಂಗ್ರಹದಲ್ಲಿ ಉಂಟಾದ ಸೋರಿಕೆಯಿಂದ ಬೆಂಕಿ ಹೊತ್ತಿದೆ.

ಉರಿಯುತ್ತಿದ್ದ ಕಾರಿನಿಂದ ದಟ್ಟವಾದ ಕಪ್ಪು ಹೊಗೆ ಹೊರಬರುತ್ತಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ. ರಂಜನಾ ಮಿಶ್ರಾ ಹಾಗೂ ಅವರ ಪುತ್ರಿಯರಾದ ರಿಧಿ ಮತ್ತು ನಿಕ್ಕಿ ಸಾವಿಗೀಡಾದವರು.

ADVERTISEMENT

ಕಾರಿನಲ್ಲಿ ಬೆಂಕಿ ಆವರಿಸಿಕೊಳ್ಳುತ್ತಿದ್ದಂತೆ ಕಾರು ಚಲಾಯಿಸುತ್ತಿದ್ದ ಉಪೇಂದ್ರ ಮಿಶ್ರಾ, ಮುಂದಿನ ಸೀಟಿನಲ್ಲಿ ಕುಳಿತಿದ್ದ ಒಬ್ಬಳು ಮಗಳೊಂದಿಗೆ ತಕ್ಷಣವೇ ಕಾರಿನಿಂದ ಹೊರ ಬಂದಿದ್ದಾರೆ. ಹಿಂಬದಿಯಲ್ಲಿ ಕುಳಿತಿದ್ದ ಹೆಂಡತಿ ಹಾಗೂ ಇಬ್ಬರು ಮಕ್ಕಳು ಬೆಂಕಿಯಿಂದ ತಪ್ಪಿಸಿಕೊಂಡು ಹೊರಬರಲಾರದೆ ಗುರುತು ಸಿಗದಷ್ಟು ಸುಟ್ಟು ಕರಕಲಾಗಿದ್ದಾರೆ.

ಅವಘಡದ ಕುರಿತ ತನಿಖೆ ಮುಂದುವರಿಸಿ, ಕಾರಣ ಪತ್ತೆ ಮಾಡಲಿದ್ದೇವೆ ಎಂದು ಡಿಸಿಪಿ ಜಸ್ಮೀತ್‌ ಸಿಂಗ್‌ ಹೇಳಿದ್ದಾರೆ. ಕಾರಿನಲ್ಲಿ ಯಾವ ಕಾರಣಕ್ಕಾಗಿ ಬೆಂಕಿ ಕಾಣಿಸಿಕೊಂಡಿದೆ ಎಂಬುದು ಉಪೇಂದ್ರ ಮಿಶ್ರಾಗೆ ತಿಳಿದಿಲ್ಲ ಹಾಗೂ ಆತ ಆಘಾತ ಸ್ಥಿತಿಯಲ್ಲಿದ್ದಾರೆ ಎಂದು ಡಿಸಿಪಿ ಮಾಹಿತಿ ನೀಡಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.