ನವದೆಹಲಿ: ‘ಬಿಹಾರದಲ್ಲಿ ಮಹಿಳೆಯೊಬ್ಬರನ್ನು ಸಜೀವ ದಹನ ಮಾಡಲಾದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಚುನಾವಣಾ ಲಾಭಕ್ಕಾಗಿ ಈ ಕೃತ್ಯವನ್ನು ಮರೆಮಾಚುತ್ತಿದ್ದಾರೆ‘ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಬಿಹಾರದ ವೈಶಾಲಿಯಲ್ಲಿ ಈ ಘಟನೆ ನಡೆದಿದೆ. ಚುನಾವಣೆ ವೇಳೆ ನಡೆದಿದ್ದರಿಂದ ಇದನ್ನು ಮುಚ್ಚಿಡಲಾಗಿದೆ ಎಂದು ರಾಹುಲ್ ಆರೋಪಿಸಿದ್ದಾರೆ. ‘15 ದಿನಗಳ ಕಾಲ ಆಕೆ ಸಾವು–ಬದುಕಿನ ನಡುವೆ ಹೋರಾಡಿ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ‘ ಎಂದು ಮಾಧ್ಯಮವೊಂದು ವರದಿ ಮಾಡಿದ್ದು, ಆ ವರದಿಯ ತುಣಕನ್ನು ರಾಹುಲ್ ಟ್ವೀಟ್ ಪೋಸ್ಟ್ ಜತೆಗೆ ಹಂಚಿಕೊಂಡಿದ್ದಾರೆ.
‘ಈ ಘಟನೆಯಲ್ಲಿ ಯಾರ ಅಪರಾಧ ಹೆಚ್ಚು ಮತ್ತು ಅಪಾಯಕಾರಿ? ಇಂತಹ ಅಮಾನವೀಯ ಕೃತ್ಯ ಎಸಗಿದ ಆರೋಪಿಯದ್ದೇ ಅಥವಾ ಅಧಿಕಾರ ದುರುಪಯೋಗ ಮಾಡಿಕೊಂಡು, ಅಧಿಕಾರದ ಲಾಭಕ್ಕಾಗಿ ಈ ಕೃತ್ಯವನ್ನು ಮರೆಮಾಚಿದವರೇ’ ಎಂದು ರಾಹುಲ್ ಟ್ವೀಟ್ನಲ್ಲಿ ಪ್ರಶ್ನಿಸಿದ್ದಾರೆ.
ಮಹಿಳೆಯೊಬ್ಬರಿಗೆ ಆಕೆಯ ಗ್ರಾಮದ ವ್ಯಕ್ತಿಯೊಬ್ಬ ಕಿರುಕುಳ ನೀಡಿದ್ದಾನೆ. ಬಳಿಕ ಸ್ನೇಹಿತರೊಂದಿಗೆ ಸೇರಿ ಆಕೆಯನ್ನು ಸಜೀವ ದಹನ ಮಾಡಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.