
ಬಾಂಬ್
ಭುವನೇಶ್ವರ: ತನಗೆ ಜೀವ ಬೆದರಿಕೆ ಇದೆ ಎಂಬ ಕಾರಣ ನೀಡಿ ಶಸ್ತ್ರಾಸ್ತ್ರ ಪರವಾನಗಿ ಪಡೆಯುವ ಉದ್ದೇಶದಿಂದ ತನ್ನ ಮನೆ ಮೇಲೆ ಬಾಂಬ್ ಎಸೆಯಲು ಹಾಗೂ ಕೆಲ ಸುತ್ತು ಗುಂಡು ಹಾರಿಸಲು ಮೂವರನ್ನು ನೇಮಿಸಿಕೊಂಡಿದ್ದ ಮಹಿಳೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಈ ಘಟನೆಯಲ್ಲಿ ಭಾಗಿಯಾದ ಆರೋಪದಡಿ ದೇಬಾಸಿಸ್ ಮೊಹಾಪಾತ್ರ (24), ಸಂತೋಷ್ ಮಹಾಖುದ್ (25), ಚಂದನ್ ನಾಯಕ್ (27) ಎಂಬವರನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿ ಭರತ್ಪುರದ ಘುಂಗುರು ಮಿಶ್ರಾ ಅವರ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
‘ಸೆ.10ರಂದು ರಾತ್ರಿ 11ರ ಸುಮಾರಿಗೆ ನನ್ನ ಮನೆಯ ಹೊರ ಭಾಗದಲ್ಲಿ ಎರಡು ಕಚ್ಚಾ ಬಾಂಬ್ಗಳನ್ನು ಎಸೆಯಲಾಗಿದೆ ಎಂದು ಆರೋಪಿಸಿ ಮಿಶ್ರಾ ಅವರು ಸೆ.11ರಂದು ದೂರು ನೀಡಿದ್ದರು. ಅಲ್ಲದೆ, ತನ್ನ ಮನೆಯ ಆವರಣದ ಗೋಡೆಗೆ ಗುಂಡು ಹಾರಿಸಲಾಗಿದೆ ಎಂದು ಆರೋಪಿಸಿ ಅ.4ರಂದು ಮತ್ತೊಂದು ದೂರು ದಾಖಲಿಸಿದ್ದರು’ ಎಂದು ಪೊಲೀಸ್ ಕಮಿಷನರ್ ಎಸ್.ದೇವದತ್ತ ಸಿಂಗ್ ತಿಳಿಸಿದ್ದಾರೆ.
‘ಶಸ್ತ್ರಾಸ್ತ್ರ ಪರವಾನಗಿ ಪಡೆಯಲು ಮಿಶ್ರಾ ಅರ್ಜಿ ಸಲ್ಲಿಸಿದ್ದರು. ಆದರೆ, ಪರವಾನಗಿ ಸಿಕ್ಕಿರಲಿಲ್ಲ. ಹೀಗಾಗಿ, ತನ್ನ ಕಾರಿನ ಚಾಲಕ ಹಾಗೂ ಇತರೆ ಇಬ್ಬರನ್ನು ಈ ಕೃತ್ಯದಲ್ಲಿ ತೊಡಗಿಸಿದ್ದ ವಿಷಯ ತನಿಖೆ ವೇಳೆ ಗೊತ್ತಾಗಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.