ನವದೆಹಲಿ: ಕಾರ್ಯಕ್ರಮವೊಂದರಲ್ಲಿ ಧ್ವನಿವರ್ಧಕ ಮೂಲಕ ದೊಡ್ಡದಾಗಿ ಡಿಜೆ ಹಾಡು ಹಾಕಿದ್ದನ್ನು ಆಕ್ಷೇಪಿಸಿದ ಮಹಿಳೆಯನ್ನು ಪಕ್ಕದ ಮನೆಯ ವ್ಯಕ್ತಿ ಗುಂಡಿಕ್ಕಿ ಕೊಂದಿರುವ ಅಮಾನವೀಯ ಘಟನೆ ವಾಯುವ್ಯ ದೆಹಲಿಯ ಸಿರಸ್ಪುರದಲ್ಲಿ ಸೋಮವಾರ ನಡೆದಿದೆ.
ಹರೀಶ್ ಎಂಬವರು ಈ ಕೃತ್ಯ ಎಸಗಿದ್ದು, ಇದಕ್ಕೆ ಅವರು ಸ್ನೇಹಿತನ ಬಂದೂಕು ಬಳಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಹರೀಶ್ ಮನೆಯಲ್ಲಿ ಸಾಂಪ್ರದಾಯಿಕ ಕಾರ್ಯಕ್ರಮ ನಡೆಯುತ್ತಿತ್ತು. ಈ ಸಂಬಂಧ ಧ್ವನಿ ವರ್ಧಕದಲ್ಲಿ ದೊಡ್ಡದಾಗಿ ಡಿಜೆ ಹಾಡುಗಳು ಬಿತ್ತರಿಸಲಾಗಿದೆ. ಮ್ಯೂಸಿಕ್ ಕಡಿಮೆ ಮಾಡುವಂತೆ ಪಕ್ಕದ ಮನೆಯ ಮಹಿಳೆಯು ಹರೀಶ್ ಅವರಲ್ಲಿ ಕೇಳಿಕೊಂಡಿದ್ದಾರೆ. ಇದಕ್ಕೆ ಉದ್ರಿಕ್ತರಾದ ಹರೀಶ್ ತನ್ನ ಸ್ನೇಹಿತ ಅಮಿತ್ ಅವರ ಬಂದೂಕು ತೆಗೆದುಕೊಂಡು ಮಹಿಳೆಯ ಹಣೆಗೆ ಗುಂಡಿಕ್ಕಿದ್ದಾನೆ ಎಂದು ಪ್ರತ್ಯಕ್ಷದರ್ಶಿ ಪೊಲೀಸರಿಗೆ ತಿಳಿಸಿದ್ದಾರೆ.
ತಕ್ಷಣ ಅಲ್ಲಿ ಸೇರಿದವರ ಸಹಾಯದಿಂದ ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಜೀವ ಉಳಿಸಲಾಗಲಿಲ್ಲ.
ಈ ಕೃತ್ಯಕ್ಕೆ ಸಂಬಂಧಿಸಿದ ಹಂತಕ ಹರೀಶ್ ಮತ್ತು ಆತನ ಸ್ನೇಹಿತ ಅಮಿತ್ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.