ADVERTISEMENT

ಉತ್ತರ ಪ್ರದೇಶ ರಾಜಧಾನಿ ‘ಲಖನೌ’ ಹೆಸರು ಬದಲಿಸುತ್ತಾರಾ ಯೋಗಿ ಆದಿತ್ಯನಾಥ್?

ಐಎಎನ್ಎಸ್
Published 17 ಮೇ 2022, 9:36 IST
Last Updated 17 ಮೇ 2022, 9:36 IST
ಯೋಗಿ ಆದಿತ್ಯನಾಥ್ - ಪಿಟಿಐ ಚಿತ್ರ
ಯೋಗಿ ಆದಿತ್ಯನಾಥ್ - ಪಿಟಿಐ ಚಿತ್ರ   

ಲಖನೌ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಕೆಲವು ಊರುಗಳ ಹೆಸರು ಬದಲಿಸುವ ಮೂಲಕ ಹಿಂದಿನ ಅವಧಿಯಲ್ಲಿ ಸುದ್ದಿಗೆ ಗ್ರಾಸವಾಗಿತ್ತು.

ಆದಿತ್ಯನಾಥ್ ಅವರು ಮಾಡಿರುವ ಟ್ವೀಟೊಂದು ಇದೀಗ ಅವರ ಸರ್ಕಾರ, ಲಖನೌ ನಗರದ ಹೆಸರನ್ನೂ ಬದಲಾಯಿಸುವ ಅನುಮಾನ ಸೃಷ್ಟಿಸಿದೆ ಎಂದು ‘ಐಎಎನ್‌ಎಸ್’ ಸುದ್ದಿಸಂಸ್ಥೆ ವರದಿ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿ ಸೋಮವಾರ ಟ್ವೀಟ್ ಮಾಡಿದ್ದ ಯೋಗಿ, ‘ಶೇಷಾವತಾರ ಭಗವಾನ್ ಲಕ್ಷ್ಮಣ್ ಜೀ ಅವರ ಪಾವನ ನಗರಕ್ಕೆ ನಿಮಗೆ ಆತ್ಮೀಯ ಸ್ವಾಗತ ಮತ್ತು ಶುಭಾಶಯಗಳು’ ಎಂದು ಉಲ್ಲೇಖಿಸಿದ್ದರು.

ADVERTISEMENT

ಇದು, ಲಖನೌ ಹೆಸರನ್ನು ಲಕ್ಷ್ಮಣ್‌ಪುರಿ ಎಂದು ಬದಲಾಯಿಸುವ ಸುಳಿವೇ ಎಂದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗಿದೆ ಎಂದು ವರದಿ ಉಲ್ಲೇಖಿಸಿದೆ.

ಲಖನೌನಲ್ಲಿ ಈಗಾಗಲೇ ಭವ್ಯ ಲಕ್ಷ್ಮಣ ದೇಗುಲ ನಿರ್ಮಾಣವಾಗುತ್ತಿದೆ.

ಲಖನೌ ಹೆಸರನ್ನು ಲಖನ್‌ಪುರಿ ಅಥವಾ ಲಕ್ಷ್ಮಣ್‌ಪುರಿ ಎಂದು ಮರುನಾಮಕರಣ ಮಾಡಬೇಕು ಎಂದು ಬಿಜೆಪಿ ನಾಯಕರು ಅನೇಕ ಬಾರಿ ಪ್ರಸ್ತಾಪಿಸಿದ್ದಾರೆ.

ಲಖನೌನ ಹಲವು ಪ್ರದೇಶಗಳಿಗೆ ಈಗಾಗಲೇ ಲಕ್ಷ್ಮಣ್ ತಿಲಾ, ಲಕ್ಷ್ಮಣ್‌ಪುರಿ ಹಾಗೂ ಲಕ್ಷ್ಮಣ್ ಪಾರ್ಕ್ ಎಂಬ ಹೆಸರುಗಳನ್ನು ಇಡಲಾಗಿದೆ.

ಯೋಗಿ ಸರ್ಕಾರವು ಈ ಹಿಂದೆ ಅಲಹಾಬಾದ್ ಅನ್ನು ಪ್ರಯಾಗ್‌ರಾಜ್ ಎಂದೂ ಫೈಜಾಬಾದ್ ಅನ್ನು ಅಯೋಧ್ಯಾ ಎಂದು ಮರುನಾಮಕರಣ ಮಾಡಿದೆ. ಇದು ಇನ್ನಷ್ಟು ನಗರಗಳ ಹೆಸರುಗಳ ಬದಲಾವಣೆಗೆ ಒತ್ತಡ ಹೆಚ್ಚಾಗುವಂತೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.