ADVERTISEMENT

ಸಿಬಿಐ ಮುಖ್ಯಸ್ಥರ ವಿರುದ್ಧ ದಿಢೀರ್ ಕ್ರಮವೇಕೆ? ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

ಏಜೆನ್ಸೀಸ್
Published 6 ಡಿಸೆಂಬರ್ 2018, 10:32 IST
Last Updated 6 ಡಿಸೆಂಬರ್ 2018, 10:32 IST
   

ನವದೆಹಲಿ:ಸಿಬಿಐ ನಿರ್ದೇಶಕರಾಗಿದ್ದ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ನಡುವಿನ ಗುದ್ದಾಟವನ್ನು ಜುಲೈನಿಂದಲೂ ಸಹಿಸಿಕೊಂಡಿದ್ದವರು, ಮಧ್ಯರಾತ್ರಿ ದಿಢೀರ್‌ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಅನಿರ್ದಿಷ್ಟಾವಧಿ ರಜೆಯ ಮೇಲೆ ಕಳುಹಿಸಿದ್ದರ ಕುರಿತು ಸರ್ಕಾರ ಮತ್ತುಕೇಂದ್ರ ಜಾಗೃತ ಆಯೋಗಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಗುರುವಾರ ಪ್ರಶ್ನೆಗಳು ಎದುರಾದವು.

ಸರ್ಕಾರದ ಪರವಾಗಿ ವಕೀಲ ಕೆ.ಕೆ.ವೇಣುಗೋಪಾಲ್‌, ’ಇಬ್ಬರೂ ಅಧಿಕಾರಿಗಳೂ ಕೆಲವು ತಿಂಗಳಿಂದ ಬೆಕ್ಕುಗಳ ರೀತಿ ಕಿತ್ತಾಡಿಕೊಳ್ಳುತ್ತಿದ್ದ ಕಾರಣದಿಂದ ಎದುರಾದ ಪರಿಸ್ಥಿತಿಯ ನಿರ್ವಹಿಸಲು ಸರ್ಕಾರ ಈ ನಿರ್ಧಾರ ಕೈಗೊಳ್ಳಬೇಕಾಯಿತು’ ಎಂದು ನಿನ್ನೆ ನ್ಯಾಯಮೂರ್ತಿಗಳಿಗೆ ತಿಳಿಸಿದ್ದರು.

ಸಿಬಿಐ ಮುಖ್ಯಸ್ಥರ ವಿರುದ್ಧ ಯಾವುದೇ ಕ್ರಮಕೈಗೊಳ್ಳುವ ಮುನ್ನ ನೇಮಕಾತಿ ಸಮಿತಿಯನ್ನು ಸಂಪರ್ಕಿಸಿ ನಿರ್ಧಾರ ತೆಗೆದುಕೊಳ್ಳುವುದು ನಿಯಮವಾಗಿದೆ. ಅದನ್ನು ಮೀರಿ ತರಾತುರಿಯಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಂಡುಹಂಗಾಮಿ ನಿರ್ದೇಶಕರೊಬ್ಬರನ್ನು ನೇಮಿಸಿ ಆದೇಶಿಸಿದ್ದನ್ನು ಕೋರ್ಟ್‌ ಪ್ರಶ್ನಿಸಿದೆ.

ADVERTISEMENT

’ನೀವು ಜುಲೈನಿಂದಲೂ ಅವರ ನಡೆಯನ್ನು ಸಹಿಸಿಕೊಂಡಿರುವುದಾದರೆ, ಎಷ್ಟೋ ದಿನಗಳಿಂದ ಉಂಟಾಗಿರುವ ವಿಷಮ ಪರಿಸ್ಥಿತಿಗೆ ದಿಢೀರ್‌ ಕ್ರಮದ ಅವಶ್ಯಕತೆ ಇರುವುದಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿಕೇಂದ್ರ ಜಾಗೃತ ಆಯೋಗಕ್ಕೆ ಹೇಳಿದರು. ಕೇಂದ್ರ ಸರ್ಕಾರವು ಕೇಂದ್ರ ಜಾಗೃತ ಆಯೋಗದ ಶಿಫಾರಸಿನ ಮೇರೆಗೆ ಸಿಬಿಐ ಮುಖ್ಯಸ್ಥರ ಸ್ಥಾನದಿಂದ ಅಲೋಕ್‌ ವರ್ಮಾ ಅವರನ್ನು ತೆರವುಗೊಳಿಸಿತು.

’ಕಾನೂನಿನಲ್ಲಿ ನಮೂದಿಸಿರದ ಪರಿಸ್ಥಿತಿಗಳು ಉದ್ಭವಿಸಿದಾಗ, ಅದನ್ನು ಅಧಿಕಾರ ಸ್ಥಾನದಲ್ಲಿರುವವರು ಎದುರುಗೊಳ್ಳಬೇಕಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಕೇಂದ್ರ ಜಾಗೃತ ಆಯೋಗದ ಸ್ಪಂದಿಸದಿದ್ದರೆ, ಆಯೋಗ ಅಧಿಕಾರ ಹೀನ ಎನಿಸಿಕೊಳ್ಳುತ್ತದೆ’ ಎಂದು ಜಾಗೃತ ಆಯೋಗ ಪ್ರತಿಕ್ರಿಯಿಸಿದೆ.

ಕೇಂದ್ರ ಜಾಗೃತ ಆಯೋಗ ತನ್ನ ಬಗ್ಗೆ ನೀಡಿರುವ ವರದಿ ಹಾಗೂ ಸರ್ಕಾರ ತೆಗೆದುಕೊಂಡಿರುವ ಕ್ರಮದ ವಿರುದ್ಧ ಅಲೋಕ್‌ ವರ್ಮಾ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ’ಸಮಿತಿಯ ಅನುಮೋದನೆಯ ನಂತರವಷ್ಟೇ ಸಿಬಿಐ ನಿರ್ದೇಶಕರನ್ನು ಸ್ಥಾನದಿಂದ ತೆರವುಗೊಳಿಸಲು ಅವಕಾಶವಿದೆ’ ಎಂದು ಅಲೋಕ್‌ ವರ್ಮಾ ಪರ ವಕೀಲ ಫಾಲಿ ನಾರಿಮನ್‌ ವಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.