
ನವದೆಹಲಿಯ ಭಾರತ ಮಂಟಪದಲ್ಲಿ ಶುಕ್ರವಾರ ಅಂಗಿಬಿಚ್ಚಿ ಪ್ರತಿಭಟನೆ ನಡೆಸಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರು
–ಪಿಟಿಐ ಚಿತ್ರ
ನವದೆಹಲಿ: ಎ.ಐ ಶೃಂಗಸಭೆಯ ‘ಎಕ್ಸ್ಪೋ’ ನಡೆಯುತ್ತಿದ್ದ ಸಭಾಂಗಣದಲ್ಲಿ ಶುಕ್ರವಾರ ಕೆಲಹೊತ್ತು ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ಸಮಿತಿಯ ನಾಲ್ವರು ಕಾರ್ಯಕರ್ತರನ್ನು ಶನಿವಾರಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯವು ಬಂಧಿತರನ್ನು ಐದು ದಿನಗಳ ಕಾಲ ಪೊಲೀಸರ ಕಸ್ಟಡಿಗೆ ಒಪ್ಪಿಸಿದೆ.
ಆರೋಪಿಗಳ ಹೆಚ್ಚಿನ ವಿಚಾರಣೆ ಅಗತ್ಯವಿದ್ದು, ಅದಕ್ಕಾಗಿ ತಮ್ಮ ವಶಕ್ಕೆ ನೀಡಬೇಕು ಎಂದು ದೆಹಲಿ ಪೊಲೀಸರು ಮನವಿ ಮಾಡಿದರು. ಈ ಮನವಿಯನ್ನು ನ್ಯಾಯಾಧೀಶ ರವಿ ಅವರು ಪುರಸ್ಕರಿಸಿದರು.
ಬಂಧಿತರನ್ನು ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಕೃಷ್ಣ ಹರಿ, ಬಿಹಾರ ರಾಜ್ಯ ಘಟಕದ ಕಾರ್ಯದರ್ಶಿ ಕುಂದನ್ ಯಾದವ್, ಉತ್ತರ ಪ್ರದೇಶ ಘಟಕದ ಅಧ್ಯಕ್ಷ ಅಜಯ್ ಕುಮಾರ್, ತೆಲಂಗಾಣ ಘಟಕದ ಅಧ್ಯಕ್ಷ ನರಸಿಂಹ ಯಾದವ್ ಎಂದು ಗುರುತಿಸಲಾಗಿದೆ.
‘ಆರೋಪಿಗಳ ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಬೇಕಿದೆ. ಇದಕ್ಕಾಗಿ ಅವರನ್ನು ವಶಕ್ಕೆ ಪಡೆಯುವುದು ಅಗತ್ಯ. ಇದೊಂದು ಗಂಭೀರವಾದ ವಿಚಾರ. ಪೊಲೀಸರ ತಡೆಯಲು ಹೋದ ವೇಳೆ ಅವರ ಮೇಲೂ ಹಲ್ಲೆ ನಡೆಸಿದ್ದು, ಮೂವರು ಪೊಲೀಸರು ಗಾಯಗೊಂಡಿದ್ದಾರೆ’ ಎಂದು ಪೊಲೀಸರ ಪರ ವಕೀಲರು ತಿಳಿಸಿದರು.
ಪ್ರತಿಭಟನೆ ಆಯೋಜನೆಯ ಜೊತೆಗೆ ಹೋರಾಟಕ್ಕೆ ಸಿಕ್ಕ ದೇಣಿಗೆ, ಟೀ–ಶರ್ಟ್ನ ಮೂಲವನ್ನು ಪತ್ತೆ ಹಚ್ಚಬೇಕಿದೆ ಎಂದು ನ್ಯಾಯಾಧೀಶರ ಗಮನಸೆಳೆದರು.
ಆರೋಪಿಗಳ ಪರ ವಾದ ಮಂಡಿಸಿದ ವಕೀಲರು, ‘ಪ್ರತಿಭಟನಕಾರರು ರಾಜಕೀಯ ಪಕ್ಷವೊಂದಕ್ಕೆ ಸೇರಿದ್ದು, ಪ್ರಜಾಪ್ರಭುತ್ವದಲ್ಲಿನ ಹಕ್ಕಿನ ಅಡಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದಾರೆ. ಅವರ ಬಂಧನವು ಪ್ರಜಾಪ್ರಭುತ್ವದ ಘನತೆಯನ್ನು ತಗ್ಗಿಸಿದೆ. ಪ್ರತಿಭಟನೆ ಮಾಡುವವರನ್ನು ಬಂಧಿಸುವುದಾದರೆ, ಸಂಸತ್ತಿನಲ್ಲಿ ಪ್ರತಿಭಟಿಸಿದ ಸಂಸದರನ್ನು ಕೂಡ ಬಂಧಿಸಬೇಕು’ ಎಂದರು.
ನಡೆದದ್ದೇನು?: ಶುಕ್ರವಾರ ಮಧ್ಯಾಹ್ನ 12.30ರ ಸುಮಾರಿಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಎ.ಐ ಶೃಂಗಸಭೆ ನಡೆಯುತ್ತಿದ್ದ ‘ಭಾರತ ಮಂಟಪ’ದ ಸಭಾಂಗಣ ಸಂಖ್ಯೆ 5ರ ಒಳಗೆ ಏಕಾಏಕಿ ಪ್ರವೇಶಿಸಿ ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಿದ್ದಾರೆ. ಪ್ರಧಾನಿ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚಿತ್ರಗಳಿರುವ ಟಿ-ಶರ್ಟ್ಗಳನ್ನು ಅವರು ಪ್ರದರ್ಶಿಸಿದರು. ಟಿ–ಶರ್ಟ್ ಮೇಲೆ ‘ಭಾರತ– ಅಮೆರಿಕ ವ್ಯಾಪಾರ ಒಪ್ಪಂದ’, ‘ಎಪ್ಸ್ಟೈನ್ ಫೈಲ್ಸ್’ ಮತ್ತು ‘ಪ್ರಧಾನಿ ರಾಜಿಯಾಗಿದ್ದಾರೆ’ ಎಂದು ಬರೆಯಲಾಗಿತ್ತು.
ಎ.ಐ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯು ಅತ್ಯಂತ ಆಕ್ಷೇಪಾರ್ಹ ಹಾಗೂ ಖಂಡನೀಯವಾಗಿದೆ..–ಮಾಯಾವತಿ, ಬಿಎಸ್ಪಿ ಮುಖ್ಯಸ್ಥೆ
ಎ.ಐ ಶೃಂಗಸಭೆಯಲ್ಲಿ ಕಾಂಗ್ರೆಸ್ ಪಕ್ಷವು ಯುವ ಕಾರ್ಯಕರ್ತರನ್ನು ಕಳುಹಿಸುವ ಮೂಲಕ ದೇಶದ ವಿರುದ್ಧ ಅತ್ಯಂತ ದೊಡ್ಡ ಪಾಪವೆಸಗಿದೆ. ದೇಶಕ್ಕೆ ಅಪಮಾನವೆಸಗಲು ಕಾಂಗ್ರೆಸ್ ಪಕ್ಷವು ಯುವಕರನ್ನು ಬಳಸಿಕೊಳ್ಳುತ್ತಿದ್ದು ಇದಕ್ಕಿಂತ ನಾಚಿಕೆಗೇಡಿನ ವಿಚಾರ ಇನ್ನೊಂದಿಲ್ಲ.–ಕಿರಣ್ ರಿಜಿಜು, ಸಂಸದೀಯ ವ್ಯವಹಾರಗಳ ಸಚಿವ
ಅತ್ಯಂತ ಒಳ್ಳೆಯ ಕಾರ್ಯಕ್ರಮವನ್ನು ಕಾಂಗ್ರೆಸ್ ಕಾರ್ಯಕರ್ತರು ಅರೆಬೆತ್ತಲೆಯಾಗಿ ಅಡ್ಡಿಪಡಿಸಿದರು. ನನಗೆ ಏನು ಹೇಳಬೇಕೆಂದು ತಿಳಿಯುತ್ತಿಲ್ಲ ನಿಜಕ್ಕೂ ದುಃಖದ ವಿಚಾರ. ಕಾಂಗ್ರೆಸ್ ಪಕ್ಷವು ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸಿದ್ದು ಇದನ್ನು ಬಲವಾಗಿ ಖಂಡಿಸುತ್ತೇನೆ.–ಎನ್.ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶ ಮುಖ್ಯಮಂತ್ರಿ
ಬಡ ಕುಟುಂಬದ ವ್ಯಕ್ತಿಯೊಬ್ಬರು ದೇಶದ ಪ್ರಧಾನಿಯಾಗಿರುವುದನ್ನು ಸಹಿಸಲು ಸಾಧ್ಯವಾಗದೇ ಕಾಂಗ್ರೆಸ್ ಪಕ್ಷವು ಕ್ರಿಮಿನಲ್ ಸಂಚು ರೂಪಿಸಿ ಪ್ರತಿಭಟನೆ ನಡೆಸಿದೆ–ಮುಕ್ತಾರ್ ಅಬ್ಬಾಸ್ ನಖ್ವಿ, ಬಿಜೆಪಿ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.