ನವದೆಹಲಿ: ಸಂಸಾರದ ದೋಣಿ ಸಾಗಿಸಲು ಹೋಟೆಲ್ ಒಂದರಲ್ಲಿ ಮ್ಯಾನೇಜರ್ ಆಗಿದ್ದರೂ ಹೆಚ್ಚುವರಿಯಾಗಿ ಜೊಮ್ಯಾಟೊ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಬೈಕ್ ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟನೆ ರಾಷ್ಟ್ರ ರಾಜಧಾನಿಯಲ್ಲಿನಡೆದಿದೆ.
ಮನೆಗೆ ಆಹಾರ ತಲುಪಿಸಲು ಹೋಗುತ್ತಿದ್ದ ರೋಹಿಣಿ ಸೆಕ್ಟರ್ನ ಬುದ್ಧ ವಿಹಾರ್ ಪ್ರದೇಶದ ಸಲೀಲ್ ತ್ರಿಪಾಠಿ (38) ಅವರ ಬೈಕ್ಗೆ ಸೋಮವಾರ ರಾತ್ರಿ ದೆಹಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಒಬ್ಬರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರ್, ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಯ ಬಳಿ ಗುದ್ದಿ ಮೃತಪಟ್ಟಿದ್ದಾರೆ.
ಸಲೀಲ್ ತ್ರಿಪಾಠಿ ಸಾವಿಗೆ ಪಾನಮತ್ತರಾಗಿ ವಾಹನ ಚಲಾಯಿಸಿದ ಹೆಡ್ ಕಾನ್ಸ್ಟೇಬಲ್ ಜಿಲೇ ಸಿಂಗ್ ಅವರೇ ಕಾರಣ ಎಂದು ತ್ರಿಪಾಠಿ ಮನೆಯವರು ಆರೋಪಿಸುತ್ತಿದ್ದಾರೆ.
ರಿಕೊ ಹೋಟೆಲ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಸಲೀಲ್ ಅವರು ಮನೆಯಲ್ಲಿ ತನ್ನ ತಾಯಿ, ಹೆಂಡತಿ ಹಾಗೂ ಮಗುವಿನ ಜೊತೆ ವಾಸವಾಗಿದ್ದರು. ಕೋವಿಡ್ನಿಂದ ಇತ್ತೀಚೆಗೆ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ಸಂಸಾರದ ಬಂಡಿ ಸಾಗಿಸಲು ಹೆಚ್ಚುವರಿ ಕೆಲಸ ಮಾಡಲು ತೀರ್ಮಾನಿಸಿದ್ದ ಸಲೀಲ್, ಇತ್ತೀಚೆಗೆ ಜೊಮ್ಯಾಟೊದಲ್ಲಿ ಫುಡ್ ಡೆಲಿವರಿ ಕೆಲಸಕ್ಕೆ ಸೇರಿಕೊಂಡಿದ್ದರು.
ಇನ್ನು ಅಪಘಾತ ನಡೆದ ಸಂದರ್ಭದಲ್ಲಿ ಜಿಲೇ ಸಿಂಗ್ ಸಂಪೂರ್ಣ ಪಾನಮತ್ತರಾಗಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹಾಗೂ ತ್ರಿಪಾಠಿ ಕುಟುಂಬದವರು ಆರೋಪಿಸುತ್ತಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸಲೀಲ್ ಅವರನ್ನು ಆಸ್ಪತ್ರೆಗೆ ಸೇರಿಸಿತ್ತಾದರೂ ಅವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಕಾನ್ಸ್ಟೇಬಲ್ ಜಿಲೇ ಸಿಂಗ್ ನನ್ನ ಪತಿಯನ್ನು ಕೊಂದಿದ್ದಾರೆ ಎಂದು ಮೃತರ ಪತ್ನಿ ಆರೋಪಿಸುತ್ತಿದ್ದಾರೆ. ಅಲ್ಲದೇ ರಿಕೊ ಕಂಪನಿಯವರು ನನ್ನ ಗಂಡನಿಗೆ ಕೆಲ ತಿಂಗಳ ಸಂಬಳವನ್ನೂ ಕೊಟ್ಟಿರಲಿಲ್ಲ. ಇದರಿಂದ ಅವರು ಜೊಮ್ಯಾಟೊ ಕೆಲಸವನ್ನು ಹೆಚ್ಚುವರಿಯಾಗಿ ಮಾಡುತ್ತಿದ್ದರು ಎಂದು ಹೇಳಿದ್ದಾರೆ.
ಇತ್ತ ಸಲೀಲ್ ಅವರ ನಿಧನಕ್ಕೆ ಅನೇಕರು ಸಂತಾಪ ಸೂಚಿಸಿದ್ದು, ಜೊಮಾಟೊದಲ್ಲಿ ಕೆಲಸ ಮಾಡುವುದು ಎಷ್ಟೊಂದು ಸುರಕ್ಷಿತ ಎಂದು ಪ್ರಶ್ನಿಸುತ್ತಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಪೊಲೀಸರು ಜಿಲೇ ಸಿಂಗ್ರನ್ನು ಬಂಧಿಸಿ, ಅವರು ಆಲ್ಕೋಹಾಲ್ ಸೇವಿಸಿದ್ದರೇ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಮೃತ ಸಲೀಲ್ ಕುಟುಂಬಕ್ಕೆ ವಿಮೆ ದೊರಕಿಸಿಕೊಡುವುದೂ ಸೇರಿದಂತೆ ಹಣಕಾಸಿನ ನೆರವನ್ನು ಕಂಪನಿ ಕಡೆಯಿಂದ ನೀಡಲಾಗುವುದು ಎಂದು ಜೊಮ್ಯಾಟೊ ಕಂಪನಿ ಹೇಳಿರುವುದಾಗಿ 'ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್' ವರದಿ ಮಾಡಿದೆ. ಅನೇಕರು ಸಲೀಲ್ ಕುಟುಂಬಕ್ಕೆ ನೆರವು ನೀಡಲು ಮುಂದೆ ಬಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.