ADVERTISEMENT

ಅಘೋಷಿತ ಅಸ್ಪೃಶ್ಯತೆ ತೊಡೆದುಹಾಕಿ

ಛಲವಾದಿ ಮಹಾಸಭಾದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2014, 19:30 IST
Last Updated 2 ಮಾರ್ಚ್ 2014, 19:30 IST
ಛಲವಾದಿ ಮಹಾಸಭಾವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ಸಮಾವೇಶದಲ್ಲಿ ಪಾಲ್ಗೊಂಡ ಛಲವಾದಿ ಸಮುದಾಯದ ಸದಸ್ಯರು	– ಪ್ರಜಾವಾಣಿ ಚಿತ್ರ
ಛಲವಾದಿ ಮಹಾಸಭಾವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ಸಮಾವೇಶದಲ್ಲಿ ಪಾಲ್ಗೊಂಡ ಛಲವಾದಿ ಸಮುದಾಯದ ಸದಸ್ಯರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸಮಾಜದಲ್ಲಿ ಅಘೋ­ಷಿತ ಅಸ್ಪೃಶ್ಯತೆ ಅಸ್ತಿತ್ವದಲ್ಲಿದ್ದು, ಅದರ ವಿರುದ್ಧ ಹೋರಾಡಲು ಸಂಘಟಿತರಾ­ಗಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಸಲಹೆ ನೀಡಿದರು.

ಛಲವಾದಿ ಮಹಾಸಭಾವು ನಗರ­ದಲ್ಲಿ ಭಾನುವಾರ ಆಯೋಜಿಸಿದ್ದ ಸಮಾವೇಶದಲ್ಲಿ ಅವರು ಮಾತನಾಡಿ, ‘ಅಸ್ಪೃಶ್ಯತೆಯೆಂಬುದು ಮನಸ್ಸಿಗೆ ಅಂಟಿದ ಮೈಲಿಗೆ. ಅದನ್ನು ತೊಡೆದು­ಹಾಕುವ ನಿಟ್ಟಿನಲ್ಲಿ ಪಣ ತೊಡಬೇಕಿದೆ’ ಎಂದು ಹೇಳಿದರು.

ಸಭಾದ ಅಧ್ಯಕ್ಷ, ನಿವೃತ್ತ ಐಎಎಸ್‌ ಅಧಿಕಾರಿ ಕೆ.ಶಿವರಾಂ, ‘ಸ್ವಾತಂತ್ರ್ಯ ಬಂದು 60 ವರ್ಷಗಳು ಕಳೆದಿದ್ದರೂ, ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ಕೆಂಗೇರಿಗಿಂತ ತುಸು ಮುಂದೆ ಹೋದರೆ ದಲಿತರಿಗೆ ಹೋಟೆಲ್‌ನಲ್ಲಿ ಪ್ರವೇಶವಿಲ್ಲ­ವೆಂಬುದು ಇಂದಿನ ಕಟು ವಾಸ್ತವ’ ಎಂದು ಹೇಳಿದರು.

‘ಛಲವಾದಿ ಸಮುದಾಯದಿಂದ ಈವರೆಗೆ ಒಬ್ಬರೂ ಮುಖ್ಯ­ಮಂತ್ರಿ­ಯಾಗಿಲ್ಲ. ಜಿ.ಪರಮೇಶ್ವರ್‌ ಅವರು ಮುಖ್ಯಮಂತ್ರಿಯಾಗಬಾರದು ಎಂಬ ಕಾರಣದಿಂದಲೇ ಅವರನ್ನು ಚುನಾವಣೆ­ಯಲ್ಲಿ ಸೋಲಿಸಲಾಗಿದೆ’ ಎಂದು ಆರೋಪಿಸಿದರು.

‘ಹಿಂದುಳಿದ ಜಾತಿಗಳು ಹಾಗೂ ಉಪಜಾತಿಗಳು ಸಂಘಟನೆಯಾಗು­ತ್ತಿ­ರುವ ಈ ಹೊತ್ತಿನಲ್ಲಿ ಛಲವಾದಿ ಸಮು­ದಾಯವು ಒಗ್ಗಟ್ಟನ್ನು ಪ್ರದರ್ಶಿಸಬೇಕು. ಆ ಮೂಲಕ ರಾಜಕೀಯ ಪ್ರಾತಿನಿಧ್ಯ ಪಡೆಯುವ ತುರ್ತು ಎದುರಾಗಿದೆ’ ಎಂದರು.

ವಿಧಾನಪರಿಷತ್‌ ಸದಸ್ಯೆ ಮೋಟಮ್ಮ, ‘ದಲಿತ ಮಹಿಳೆಯರು ಸ್ವಾಭಿಮಾನ­ದಿಂದ ಸ್ವಾವಲಂಬಿಗಳಾಗಬೇಕು. ಆ ಮೂಲಕ ಸಮುದಾಯಕ್ಕೆ ಉತ್ತಮ ಹೆಸರು ತರಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.