ಶಕ್ತಿನಗರ (ರಾಯಚೂರು): ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರಕ್ಕೆ (ಆರ್ಟಿಪಿಎಸ್) ಗಣಿಗಳಿಂದ ಸರ್ಮಪಕವಾಗಿ ಕಲ್ಲಿದ್ದಲು ರೇಕ್ ಬಾರದೆ ಸಮಸ್ಯೆ ಎದುರಾಗಿದೆ.
ಸಿಂಗರೇಣಿ, ಮಹಾನದಿ ಕೋಲ್ಫೀಲ್ಡ್, ವೆಸ್ಟರ್ನ್ ಕೋಲ್ಫೀಲ್ಡ್ ಕಂಪೆನಿಯ ಕಲ್ಲಿದ್ದಲು ಗಣಿಗಳಿಂದ ಆರ್ಟಿಪಿಎಸ್ಗೆ ನಿತ್ಯ ಕನಿಷ್ಠ 8 ಕಲ್ಲಿದ್ದಲು ರೇಕ್ಗಳು (ಒಂದು ರೇಕ್ 59 ಬೋಗಿಗಳಿರುವ ಸರಕು ಸಾಗಣೆ ರೈಲು) ಬರಬೇಕು. ಈಗ ಕೇವಲ 2 ರಿಂದ 4 ರೇಕ್ಗಳು ಬರುತ್ತಿರುವುದರಿಂದ ಕಲ್ಲಿದ್ದಲು ಸಂಗ್ರಹ ಕುಸಿತವಾಗಿದೆ.
ಆರ್ಟಿಪಿಎಸ್ ಎಂಟು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆಗೆ ನಿತ್ಯ 30 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲು ಅಗತ್ಯವಿದೆ. ಕಳೆದ ನಾಲ್ಕೈದು ದಿನಗಳಿಂದ ಕಲ್ಲಿದ್ದಲು ಗಣಿಗಳಿಂದ ಸಮರ್ಪಕವಾಗಿ ಪೂರೈಕೆಯಾಗದೆ ಸದ್ಯ 50 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲು ಸಂಗ್ರಹ ಇದೆ.
ಸಂಗ್ರಹ ಕಡಿಮೆ ಇರುವುದರಿಂದ ವಿವಿಧ ಗಣಿಗಳಿಂದ ಬರುವ ಕಲ್ಲಿದ್ದಲನ್ನು ಸಂಗ್ರಹಾಗಾರಕ್ಕೆ ಸುರಿಯುವ ಬದಲಾಗಿ ನೇರವಾಗಿ ವಿದ್ಯುತ್ ಘಟಕಗಳಿಗೆ ಪೂರೈಕೆ ಮಾಡುವ ಬಂಕ್ಗಳಿಗೆ ಸುರಿಯಬೇಕಿದೆ.
‘ಇನ್ನೆರಡು ದಿನದಲ್ಲಿ ಸಮರ್ಪಕವಾಗಿ ರೇಕ್ಗಳು ಬಾರದೆ ಇದ್ದಲ್ಲಿ ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಗಿತಗೊಳಿಸುವುದು ಅನಿವಾರ್ಯ’ ಎಂದು ಆರ್ಟಿಪಿಎಸ್ ಅಧಿಕಾರಿಗಳು ಹೇಳುತ್ತಿದ್ದಾರೆ.
***
ಮಳೆ ಆಗುತ್ತಿರುವುದರಿಂದ ಕಲ್ಲಿದ್ದಲು ಗಣಿಗಳಿಂದ ರೇಕ್ಗಳು ಬರಲು ತೊಂದರೆ ಆಗಿದೆ. ಇದರಿಂದ ಸಂಗ್ರಹ ಕುಸಿತವಾಗಿದೆ. ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ
ಸಿ.ವೇಣುಗೋಪಾಲ , ಮುಖ್ಯ ಕಾರ್ಯನಿರ್ವಹಕ ನಿರ್ದೇಶಕ, ಆರ್ಟಿಪಿಎಸ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.