ದಾವಣಗೆರೆ: ರಾಜ್ಯದಲ್ಲಿ ಮಹಿಳಾ ಅಭಿವೃದ್ಧಿ ನಿಗಮದಿಂದ ಜಾರಿಗೊಂಡಿದ್ದ `ಇ-ಮಹಿಳೆ~ (ವಿದ್ಯುನ್ಮಾನ- ಮಹಿಳೆ) ಯೋಜನೆ ನಂಬಿದ ಮಹಿಳೆಯರು ಸಾಲದ ಹೊರೆ ಹೊರುವಂತಾಗಿದೆ. ಯೋಜನೆಯು ಹುಟ್ಟುತ್ತಲೇ ಕಣ್ಮುಚ್ಚಿದೆ. ಬೇಜವಾಬ್ದಾರಿ ಸಂಸ್ಥೆಯೊಂದಕ್ಕೆ ಅನುಷ್ಠಾನದ ಹೊಣೆ ವಹಿಸಿದ್ದು ಇದಕ್ಕೆ ಕಾರಣ.
ಮಹಿಳೆಯರು ಕಂಪ್ಯೂಟರ್ ಜ್ಞಾನ ಹೊಂದಬೇಕು. ಸ್ತ್ರೀಶಕ್ತಿ ಸಂಘದವರು ಆಧುನಿಕ ತಂತ್ರಜ್ಞಾನದ ಬಳಸಿ, ಸ್ವ-ಉದ್ಯೋಗ ಕೈಗೊಂಡು, ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಯೋಜನೆ ಜಾರಿಗೊಳಿಸಲಾಗಿತ್ತು.
ದಾವಣಗೆರೆ, ಬೆಳಗಾವಿ, ಧಾರವಾಡ, ಕೊಡಗು, ಶಿವಮೊಗ್ಗ, ಹಾಸನ, ಮೈಸೂರು, ಹಾವೇರಿ, ವಿಜಾಪುರ, ಚಿತ್ರದುರ್ಗ ಜಿಲ್ಲೆಗಳಲ್ಲಿ 200 ಗ್ರಾಮಗಳ ವಿವಿಧ ಸ್ತ್ರೀಶಕ್ತಿ ಸಂಘಗಳ 250ಕ್ಕೂ ಹೆಚ್ಚು ಮಹಿಳೆಯರಿಗೆ ಪ್ರಥಮ ಬಾರಿಗೆ ದಾವಣಗೆರೆಯಲ್ಲಿ ಕಂಪ್ಯೂಟರ್ ತರಬೇತಿ ನೀಡಲಾಗಿತ್ತು. ಎನ್ಜಿಒ ಸಂಸ್ಥೆಯೊಂದು ಮಹಿಳಾ ಅಭಿವೃದ್ಧಿ ನಿಗಮದ ಜತೆ ಒಪ್ಪಂದ ಮಾಡಿಕೊಂಡಿತ್ತು.
ಪ್ರಾಯೋಗಿಕವಾಗಿ ಜಾರಿಯಾಗಿದ್ದ ಈ ಯೋಜನೆಯನ್ನು ಇತರ ಜಿಲ್ಲೆಗಳಿಗೆ ವಿಸ್ತರಿಸುವ ಉದ್ದೇಶವಿತ್ತು. ಆದರೆ, ಆರಂಭದಲ್ಲಿಯೆ ಮುಗ್ಗರಿಸಿದೆ. ಕಂಪ್ಯೂಟರ್ ಇಟ್ಟುಕೊಂಡು ಒಂದಷ್ಟು ಹಣ ಗಳಿಸಬಹುದು ಎಂದುಕೊಂಡು, ಬ್ಯಾಂಕ್ಗಳಿಂದ ಸಾಲ ಪಡೆದಿದ್ದ ಮಹಿಳೆಯರಿಗೆ ಸಮರ್ಪಕ ತರಬೇತಿ ಹಾಗೂ ಉಪಕರಣಗಳು ಸಿಕ್ಕಿಲ್ಲ.
`ಕೈಸುಟ್ಟು~ಕೊಂಡ ಮಹಿಳೆಯರು, ಸಾಲದಿಂದ ಲಾಭ ಆಗದಿದ್ದರೂ ಬ್ಯಾಂಕ್ಗಳಿಗೆ ಮರುಪಾವತಿಸಬೇಕಿದೆ. ಅನುಷ್ಠಾನ ಏಜೆನ್ಸಿಯಾಗಿದ್ದ ಸಂಸ್ಥೆ, `ಕೈ~ ಕೊಟ್ಟಿದ್ದೇ ಇದಕ್ಕೆ ಕಾರಣ ಎಂಬ ಸಂಗತಿ ಬೆಳಕಿಗೆ ಬಂದಿದೆ. ನಷ್ಟ ಅನುಭವಿಸಿದ ಕೆಲ ಮಹಿಳೆಯರು `ಪ್ರಜಾವಾಣಿ~ಗೆ ಈ ಬಗ್ಗೆ ಮಾಹಿತಿ ನೀಡಿದರು.
ಯೋಜನೆ ಪ್ರಕಾರ, ತರಬೇತಿ ಪಡೆದ ನಗರ/ ಗ್ರಾಮೀಣ ಮಹಿಳೆಯರಿಗೆ ಕಂಪ್ಯೂಟರ್, ಪ್ರಿಂಟರ್, ಯುಪಿಎಸ್, ಎಲ್ಸಿಡಿ ಪ್ರೊಜೆಕ್ಟರ್, ಡಿಜಿಟಲ್ ಕ್ಯಾಮರಾ, ವೆಬ್ ಕ್ಯಾಮೆರಾ, ಮಣ್ಣು ಪರೀಕ್ಷಾ ಕಿಟ್, ಅಂತರ್ಜಾಲ ಸಂಪರ್ಕ, ರೈಲು ಮತ್ತು ವಿಮಾನ ಪ್ರಯಾಣ ಟಿಕೆಟ್ ಮುಂಗಡ ಬುಕ್ಕಿಂಗ್ ಮಾಡಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಲಾಗಿತ್ತು.
ಆಯ್ಕೆಯಾದ ಮಹಿಳೆಯರಿಗೆ ರಾಷ್ಟ್ರೀಕೃತ ಬ್ಯಾಂಕ್ಗಳಿಂದ ಸಾಲ ಕೊಡಿಸಲಾಗಿತ್ತು. ಆದರೆ ಏಜೆನ್ಸಿಯಾಗಿದ್ದ ಸಂಸ್ಥೆ ಹಣ ಪಡೆದು, ಮಹಿಳೆಯರಿಗೆ ಕೇವಲ ಕಂಪ್ಯೂಟರ್ ನೀಡಿತು. ಇತರ ಉಪಕರಣ ಕೊಡಲಿಲ್ಲ. ನಂತರ ತರಬೇತಿ ನೀಡಲಿಲ್ಲ ಎಂದು ತಿಳಿಸಿದರು.
ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ವಾಸುದೇವ ಪ್ರತಿಕ್ರಿಯಿಸಿ, `ಅದು ಉತ್ತಮ ಯೋಜನೆಯಾಗಿತ್ತು. ಗ್ರಾಮೀಣ ಮಹಿಳೆಯರು, ಆಧುನಿಕ ತಂತ್ರಜ್ಞಾನ ಬಳಸಿ ಒಂದಷ್ಟು ಹಣ ಗಳಿಸಬಹುದಾಗಿತ್ತು. ಮಹಿಳೆಯರಿಗೆ ಇಂತಿಷ್ಟು ಉಪಕರಣ, ತರಬೇತಿ ನೀಡಬೇಕು ಎಂದು ಎನ್ಜಿಒ- ಮಹಿಳಾ ಅಭಿವೃದ್ಧಿ ನಿಗಮದ ಜತೆ ಒಪ್ಪಂದವಾಗಿತ್ತು. ಕೆಲವರಿಗೆ ಸಾಲವೂ ದೊರೆತಿತ್ತು. ಕೆಲವರಿಗೆ ಕಂಪ್ಯೂಟರ್ ಮಾತ್ರ ಸಿಕ್ಕಿದೆ. ನಂತರ ಯೋಜನೆ ನಿಂತಿದೆ. ಈ ಸಂಬಂಧ ಎನ್ಜಿಒ ಮುಖ್ಯಸ್ಥ ಶಿವಕುಮಾರ್ ಎಂಬುವವರ ವಿರುದ್ಧ ಬೆಂಗಳೂರಿನ ಜಯನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ~ ಎಂದು ತಿಳಿಸಿದರು.
`ಸರ್ಕಾರದ ಸಹಯೋಗದ ಯೋಜನೆ ಇದಾದರೂ, ನಾವು ನಮ್ಮ ಹೆಸರಿನಲ್ಲಿ ಸಾಲ ಪಡೆದಿದ್ದೇವೆ. ರೂ 1.80 ಲಕ್ಷ ಡಿಡಿ ಪಡೆದ ವ್ಯಕ್ತಿ, ಎಲ್ಲ ಉಪಕರಣ ನೀಡದೆ ಮೋಸ ಮಾಡಿದ್ದಾನೆ. ನಕಲಿ ಉಪಕರಣ ನೀಡಿದ್ದಾನೆ. ಆ ವ್ಯಕ್ತಿ ಜೈಲಿಗೆ ಹೋಗಿ ಬಂದಿದ್ದಾರೆ. ಆದರೆ, ನಮಗೆ ನ್ಯಾಯ ದೊರೆತಿಲ್ಲ. ಸಾಲದಿಂದ ಎಷ್ಟೋ ಕುಟುಂಬಗಳು ತೊಂದರೆಗೆ ಸಿಲುಕಿವೆ.
ಮಹಿಳಾ ಅಭಿವೃದ್ಧಿ ನಿಗಮದ ಈಗಿನ ಅಧ್ಯಕ್ಷರು ಮಾಹಿತಿ ಪಡೆದಿದ್ದಾರೆ. ನ್ಯಾಯ ದೊರಕಿಸಲು ಸರ್ಕಾರ ಮುಂದಾಗಬೇಕು~ ಎಂಬುದು ನೊಂದವರ ಒತ್ತಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.