ADVERTISEMENT

ಉದ್ದೇಶ ಒಂದು; ಸಮಾವೇಶ ಎರಡು

ಅಂತರ್ಜಾತಿ ವಿವಾಹಿತರ ಪ್ರತ್ಯೇಕ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 9 ಮೇ 2016, 20:20 IST
Last Updated 9 ಮೇ 2016, 20:20 IST
ಮಂಡ್ಯದಲ್ಲಿ ವಿಶ್ವಮಾನವ ವಿಚಾರ ವೇದಿಕೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಜಾತಿಮುಕ್ತ ಮನಸ್ಸುಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಸಾಹಿತಿ ದೇವನೂರ ಮಹಾದೇವ ಮಾತನಾಡಿದರು
ಮಂಡ್ಯದಲ್ಲಿ ವಿಶ್ವಮಾನವ ವಿಚಾರ ವೇದಿಕೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಜಾತಿಮುಕ್ತ ಮನಸ್ಸುಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಸಾಹಿತಿ ದೇವನೂರ ಮಹಾದೇವ ಮಾತನಾಡಿದರು   

ಮಂಡ್ಯ: ಎರಡು ಕಡೆ, ಎರಡು ವೇದಿಕೆಯವರು ಆಯೋಜಿಸಿದ್ದ ಅಂತರ್ಜಾತಿ, ಅಂತರ ಧರ್ಮೀಯ ವಿವಾಹಿತರ ಸಮಾವೇಶಕ್ಕೆ ಸೋಮವಾರ ಮಂಡ್ಯ ಸಾಕ್ಷಿಯಾಯಿತು.

ವಿಶ್ವ ಮಾನವ ವೇದಿಕೆಯ ಕಾರ್ಯಕ್ರಮವನ್ನು ಮಾಜಿ ಅಡ್ವೋಕೇಟ್‌ ಜನರಲ್‌ ಪ್ರೊ.ರವಿವರ್ಮಕುಮಾರ್ ಉದ್ಘಾಟಿಸಿದರೆ, ಮನುಜಮತ ವಿಶ್ವಪಥ ವೇದಿಕೆ ಕಾರ್ಯಕ್ರಮಕ್ಕೆ ಬೆಂಗಳೂರು ಮಾನವ ಧರ್ಮ ಪೀಠದ ಪೀಠಾಧ್ಯಕ್ಷ ವೀರಭದ್ರಚನ್ನಮಲ್ಲ ಸ್ವಾಮೀಜಿ ಚಾಲನೆ ನೀಡಿದರು.

ವಿಶ್ವ ಮಾನವ ವೇದಿಕೆಯಲ್ಲಿ ಆಶಯ ನುಡಿಯಾಡಿದ ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು, ಇಂತಹ ವಿಷಯದಲ್ಲಿ ಪ್ರತ್ಯೇಕವಾಗಿಯೇ ಕಾರ್ಮಕ್ರಮ ಮಾಡಿ. ಜಾತಿ ಶಾಪ ವಿಮೋಚನೆ ಅಗತ್ಯವಾಗಿದೆ. ಈ ಪ್ರತ್ಯೇಕತೆ ಎಲ್ಲದಕ್ಕೂ ಸಲ್ಲುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದರು.

ಮನುಜಮತ ವಿಶ್ವಪಥ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಾನವ ಧರ್ಮ ಪೀಠದ ಪೀಠಾಧ್ಯಕ್ಷ ವೀರಭದ್ರಚನ್ನಮಲ್ಲ ಸ್ವಾಮೀಜಿ, ಒಡೆದ ಮನಸ್ಸು ಒಗ್ಗೂಡಿಸುತ್ತಿರುವುದು ಸರಿ. ಎರಡು ಕಾರ್ಯಕ್ರಮಗಳಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯವಿಲ್ಲ. ಸ್ಥಳೀಯ ವೈಯಕ್ತಿಕ ಭಿನ್ನಾಭಿಪ್ರಾಯದಿಂದ ಬೇರೆ, ಬೇರೆ ಕಾರ್ಯಕ್ರಮ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಎರಡನ್ನೂ ಒಂದೇ ವೇದಿಕೆಯಲ್ಲಿ ರೂಪಿಸಬೇಕು. ಇದರಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ರವಾನೆಯಾಗುತ್ತದೆ. ಹೋರಾಟಕ್ಕೂ ಹೆಚ್ಚು ಶಕ್ತಿ ಬರುತ್ತದೆ ಎಂದರು.

ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕ ಅರವಿಂದ ಮಾಲಗತ್ತಿ ಮಾತನಾಡಿ, ಇಂತಹ ಕಾರ್ಯಕ್ರಮ ಹತ್ತು ವೇದಿಕೆಗಳಲ್ಲಿ ನಡೆದರೂ ಒಳ್ಳೆಯದು. ಹೆಚ್ಚು ಜನರನ್ನು ತಲುಪಲು ನೆರವಾಗುತ್ತವೆ ಎಂದರು.

ಕೃಷ್ಣ, ವರ್ಣಸಂಕರದ ಪಿತಾಮಹ: ಮಹಾಭಾರತದ ಕೃಷ್ಣ, ವರ್ಣಸಂಕರದ ಪಿತಾಮಹ. ಆದರೆ, ಈಗ ವರ್ಣಸಂಕರ ತಡೆಯುವುದಕ್ಕೆ ದೇವರನ್ನೇ ಕಾವಲು ಮಾಡಲಾಗಿದೆ.

ವರ್ಣಸಂಕರ ಆದವರ ಜೀವನವನ್ನು ನರಕ ಮಾಡಿದ್ದೇವೆ ಎಂದು ಸಾಹಿತಿ ದೇವನೂರ ಮಹಾದೇವ ಹೇಳಿದರು.

ಜಾತಿ ಆಚರಣೆ, ತಾರತಮ್ಯ, ಅನ್ಯಾಯ, ಸುಲಿಗೆಯನ್ನು ಒಪ್ಪಿಕೊಂಡು, ಅವರೇ ಅದನ್ನು ಅನುಸರಿಸಿಕೊಂಡು ಹೋಗುವಂತಹ ವ್ಯವಸ್ಥೆಯನ್ನು ದೇಶದಲ್ಲಿ ಹುಟ್ಟುಹಾಕಲಾಗಿದೆ. ಈ ಕೆಲಸವನ್ನು ಅಮೆರಿಕಾದ ಗೂಢಚಾರ ಸಂಸ್ಥೆಯಿಂದಲೂ ಮಾಡಲು ಸಾಧ್ಯವಿಲ್ಲ ಎಂದರು.

ಬೇರೆ ಜಾತಿಯವರನ್ನು ಪ್ರೀತಿಸಿದ ಮಕ್ಕಳನ್ನು ಕೊಲೆ ಮಾಡುವುದು ಪೈಶಾಚಿಕ ಕೃತ್ಯ. ಜಾತಿ ಆಳವಾಗಿ ಬೇರೂರಿದೆ. ಜಾತಿ ಬಿಟ್ಟು ಒಂದಾದರೆ ಮಾತ್ರ ಬಲಾಢ್ಯ ಭಾರತ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ರೈತ ನಾಯಕಿ ಸುನಂದಾ ಜಯರಾಂ ಮಾತನಾಡಿದರು. ಹಿರಿಯ ಸಾಹಿತಿ ಎಚ್‌.ಎಲ್‌.ಕೇಶವಮೂರ್ತಿ, ಮೈಸೂರು ಮಾನವ ಮಂಟಪದ ಉಗ್ರನರಸಿಂಹೇಗೌಡ, ನ್ಯಾಯವಾದಿ ಬಿ.ಟಿ.ವಿಶ್ವನಾಥ, ಭಾರತೀಯ ಬೌದ್ಧ ಮಹಾಸಭಾದ ಎಂ.ಸಿ.ಶಿವರಾಜ್‌, ರೈತ ಮುಖಂಡ ಮುದ್ದೇಗೌಡ ಇದ್ದರು.

ದೇವತೆಗಳದ್ದೇ ಅಂತರ್ಜಾತಿ ವಿವಾಹ
ದೇವರಾದ ಶಿವ, ರಾಮ, ಚಲುವನಾರಾಯಣಸ್ವಾಮಿ ಅಂತರ್ಜಾತಿ ವಿವಾಹವಾಗಿದ್ದಾರೆ. ದೇವರೇ ಆಗಿರುವಾಗ ನೀವ್ಯಾಕೆ ಹಿಂದೆ–ಮುಂದೆ ನೋಡುತ್ತೀರಾ ಎಂದು ಮಾಜಿ ಅಡ್ವೋಕೇಟ್‌ ಜನರಲ್‌ ಪ್ರೊ.ರವಿವರ್ಮಕುಮಾರ್‌ ಪ್ರಶ್ನಿಸಿದರು.

ಜಾತಿಮುಕ್ತ ಮನಸ್ಸುಗಳ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಮನು ಅನಾಥ ಮಗುವಾದ ಸೀತೆಯನ್ನು ಮದುವೆಯಾಗುತ್ತಾನೆ. ಶಿವನು ದಕ್ಷ ಮಹಾರಾಜನ ಮಗಳನ್ನು ಮದುವೆಯಾಗುತ್ತಾನೆ.

ಅಷ್ಟೇ ಏಕೆ ವಶಿಷ್ಠ, ಜಮದಗ್ನಿ, ವಿಶ್ವಾಮಿತ್ರ ಋಷಿಗಳೂ ಬೇರೆ ಜಾತಿಯವರನ್ನು ಮದುವೆ ಆಗಿದ್ದಾರೆ. ಅವರಿಗೆ ಆದರ್ಶವಾಗಿದ್ದು, ಮಾನವರಾದ ನಮಗೇಕೆ ಆಗಿಲ್ಲ ಎಂದು ಕೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT