ಗದಗ: ತಾಲ್ಲೂಕಿನ ಹರ್ಲಾಪುರ ಬಳಿ ಸೋಮವಾರ ಬೆಳಿಗ್ಗೆ, ಹುಬ್ಬಳ್ಳಿ– ತಿರುಪತಿ ಪ್ಯಾಸೆಂಜರ್ ರೈಲಿನ ಎಂಜಿನ್ನಿಂದ ಬೋಗಿಗಳು ಬೇರ್ಪಟ್ಟು, ಎಂಜಿನ್ ಮಾತ್ರ ಹಳಿಗಳ ಮೇಲೆ ಅರ್ಧ ಕಿ.ಮೀ ನಷ್ಟು ಮುಂದೆ ಸಾಗಿ, ಆತಂಕ ಸೃಷ್ಟಿಸಿತ್ತು.
ಘಟನೆಯಲ್ಲಿ ಯಾವುದೇ ಅನಾಹುತ ಆಗಿಲ್ಲ. ಆದರೆ, ರೈಲು ಸಂಚಾರದಲ್ಲಿ 10 ನಿಮಿಷ ವ್ಯತ್ಯಯವಾಯಿತು.
‘ರೈಲು ಹುಬ್ಬಳ್ಳಿಯಿಂದ ತಿರುಪತಿಗೆ ಹೊರಟಿತ್ತು. ಬೆಳಿಗ್ಗೆ 9.50ರ ಸುಮಾರಿಗೆ ಗದುಗಿನ ಕಣಗಿನಹಾಳ ದಾಟಿ, ಹರ್ಲಾಪುರ ನಿಲ್ದಾಣ ಪ್ರವೇಶಿಸಲು ಎರಡು ನಿಮಿಷ ಇದ್ದಾಗ ಕೊಂಡಿ ಕಳಚಿ ಬೋಗಿಗಳು ಎಂಜಿನ್ನಿಂದ ಬೇರ್ಪಟ್ಟವು. ಇದು ಲೋಕೊ ಪೈಲಟ್ ಗಮನಕ್ಕೆ ಬರುವಷ್ಟರಲ್ಲಿ, ಎಂಜಿನ್ ಅರ್ಧ ಕಿ.ಮೀ ನಷ್ಟು ಮುಂದೆ ಹೋಗಿತ್ತು. ನಂತರ ಎಂಜಿನ್ನೊಂದಿಗೆ ವಾಪಸ್ ಬಂದ ಲೋಕೋ ಪೈಲಟ್, ಬೋಗಿಯ ಕೊಂಡಿಯನ್ನು ಎಂಜಿನ್ಗೆ ಸಮರ್ಪಕವಾಗಿ ಜೋಡಿಸಿದರು. ನಂತರ ಪ್ರಯಾಣ ಮುಂದುವರೆಯಿತು’ ಎಂದು ನೈರುತ್ಯ ರೈಲ್ವೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಕಿರಣ್ ತಿಳಿಸಿದರು.
‘ಸಾಮಾನ್ಯವಾಗಿ ಬೋಗಿಗಳ ಕೊಂಡಿ ಕಳಚುವುದಿಲ್ಲ. ತಾಂತ್ರಿಕ ಲೋಪದಿಂದ ಈ ರೀತಿ ಆಗಿರಬಹುದು. ತನಿಖೆ ನಂತರ ಕಾರಣ ತಿಳಿಯಲಿದೆ’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.