ಮೈಸೂರು (ತಲಕಾಡು): ಕಾವೇರಿ ನದಿ ತೀರದಲ್ಲಿ ಶವಸಂಸ್ಕಾರ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗ್ರಾಮದ ರಾಜು ಎಂಬುವರ ಪತ್ನಿ ಮಂಗಳಗೌರಿ ಅವರ ಶವಸಂಸ್ಕಾರ ಮಾಡುತ್ತಿರುವುದನ್ನು ಪ್ರವಾಸಿ ಮಹಿಳೆಯೊಬ್ಬರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ.
ಗ್ರಾಮಸ್ಥರು ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ‘ನೂರಾರು ವರ್ಷಗಳಿಂದಲೂ ಕಾವೇರಿ ನದಿ ತೀರದಲ್ಲೇ ಶವಸಂಸ್ಕಾರ ಮಾಡುತ್ತಿದ್ದೇವೆ. ಇದು ಗ್ರಾಮದ ಸಂಪ್ರದಾಯ’ ಎಂದಿದ್ದಾರೆ.
ಗ್ರಾಮಸ್ಥರ ಸಭೆ: ಮಾಧ್ಯಮಗಳಲ್ಲಿ ವಿಡಿಯೊ ಪ್ರಸಾರವಾಗುತ್ತಿದ್ದಂತೆ ಎಚ್ಚರಗೊಂಡ ಪೊಲೀಸರು, ಸೋಮವಾರ ಗ್ರಾಮದಲ್ಲಿ ಸಭೆ ನಡೆಸಿದರು.
‘ಕಾವೇರಿ ತೀರದಲ್ಲಿರುವ ನಿಸರ್ಗಧಾಮದಲ್ಲಿ ಅಂತ್ಯಕ್ರಿಯೆ ನಡೆಸಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ ಹಾಗೂ ಜಿಲ್ಲಾಧಿಕಾರಿ ಡಿ.ರಂದೀಪ್ ಸೂಚಿಸಿದ್ದಾರೆ’ ಎಂದು ಎಎಸ್ಐ ರಮೇಶ್ ಸಭೆಯಲ್ಲಿ ತಿಳಿಸಿದರು.
‘ಸೂಕ್ತ ಜಾಗ ನೀಡಿ, ಸೌಲಭ್ಯ ಕಲ್ಪಿಸಿದರೆ ಮಾತ್ರ ಅಲ್ಲಿ ಅಂತ್ಯಕ್ರಿಯೆ ನಡೆಸುತ್ತೇವೆ’ ಎಂದು ಗ್ರಾಮಸ್ಥರು ಹೇಳಿದರು.
ಸರ್ಕಾರಿ ಜಾಗ ನೀಡುವೆವು: ‘ಶವಸಂಸ್ಕಾರಕ್ಕಾಗಿ ಸರ್ಕಾರಿ ಜಾಗ ನೀಡಲಾಗುವುದು. ಹಾಲಿ ಜಾಗದಲ್ಲಿ ಶವಸಂಸ್ಕಾರ ನಡೆಸದಂತೆ ಫಲಕ ಹಾಕುವಂತೆ ಅರಣ್ಯ ಇಲಾಖೆಗೆ ಸೂಚಿಸಲಾಗುವುದು’ ಎಂದು ತಿ.ನರಸೀಪುರ ತಹಶೀಲ್ದಾರ್ ಶಂಕರಯ್ಯ ತಿಳಿಸಿದರು.
***
ಕಾವೇರಿ ನದಿಗೆ ಬೂದಿ ಬಿಡಲೂ ಅವಕಾಶವಿಲ್ಲ. ಶವಸಂಸ್ಕಾರಕ್ಕೆ ಬದಲಿ ವ್ಯವಸ್ಥೆ ಮಾಡಲು ಚಿಂತಿಸುತ್ತಿದ್ದೇವೆ
ಡಿ.ರಂದೀಪ್, ಜಿಲ್ಲಾಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.