ADVERTISEMENT

ತಲಚೇರಿ-ಮೈಸೂರು ರೈಲು: ಜಾಗರಣ ಜಾಥಾ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 16:45 IST
Last Updated 16 ಫೆಬ್ರುವರಿ 2011, 16:45 IST

ಮೈಸೂರು: ತಲಚೇರಿ-ಮೈಸೂರು ನಡುವೆ ರೈಲ್ವೆ ಸಂಚಾರವನ್ನು ಆರಂಭಿಸುವಂತೆ ಕೇಂದ್ರ ರೈಲ್ವೆ ಸಚಿವರಿಗೆ ಒತ್ತಾಯಿಸುವ ಸಲುವಾಗಿ ಕರ್ನಾಟಕ ಮತ್ತು ಕೇರಳ ರಾಜ್ಯದ ಜನರ ಸಹಕಾರ ಕೋರಲು ಮೈಸೂರಿನಿಂದ ತಲಚೇರಿವರೆಗೆ ಹಮ್ಮಿಕೊಂಡಿದ್ದ ಜನ ಜಾಗರಣ ಜಾಥಾ ನಗರದ ಪುರಭವನದಿಂದ ಬುಧವಾರ ಹೊರಟಿತು.
ತಲಚೇರಿ-ಮೈಸೂರು ರೈಲ್ವೆ ಲೈನ್ ಆಕ್ಷನ್ ಕೌನ್ಸಿಲ್ ಜನರಲ್ ಸಂಚಾಲಕ ಕಲವೂರು ಜಾನ್‌ಸನ್ ಅವರಿಗೆ ಶಾಸಕ ವಿ.ಶ್ರೀನಿವಾಸ ಪ್ರಸಾದ್ ಅವರು ಧ್ವಜವನ್ನು ಹಸ್ತಾಂತರಿಸುವ ಮೂಲಕ ಜನ ಜಾಗರಣ ಜಾಥಾಕ್ಕೆ ಚಾಲನೆ ನೀಡಿದರು. ಬಳಿಕ ಜನರಿಂದ ಸಹಿ ಸಂಗ್ರಹಿಸಲಾಯಿತು.

55 ವರ್ಷಗಳ ಹಿಂದೆ ಲಾಲ್‌ಬಹದ್ದೂರ್‌ಶಾಸ್ತ್ರಿ ಅವರು ಈ ರೈಲು ಮಾರ್ಗವನ್ನು ಆರಂಭಿಸುವುದಾಗಿ ಭರವಸೆ ನೀಡಿದ್ದರು. ಅವರ ನಂತರ ಬಂದ ಎಲ್ಲ ಸಚಿವರೂ ಅದೇ ಭರವಸೆಯನ್ನು ಮುಂದುವರಿಸಿದರು. ಆದರೆ, ಇದುವರೆಗೂ ರೈಲು ಸಂಚಾರ ಆರಂಭವಾಗಿಲ್ಲ. ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದರೆ ಕೇರಳ, ಮೈಸೂರು, ಚಾಮರಾಜನಗರ ಮತ್ತು ಹುಣಸೂರು ಭಾಗದ ರೈತರಿಗೆ ಪ್ರಯೋಜನವಾಗಲಿದೆ. ಮೈಸೂರಿನಿಂದ ತಲಚೇರಿಗೆ ಪ್ರತಿ ನಿತ್ಯ 50-60 ಲೋಡ್ ತರಕಾರಿ ಸರಬರಾಜು ಆಗುತ್ತಿದೆ. ರೈಲು ಸಂಚಾರವನ್ನು ಆರಂಭಿಸಿದರೆ ರೈತರಿಗೆ ಸಾಗಾಣಿಕೆ ವೆಚ್ಚ ಕಡಿಮೆಯಾಗಲಿದೆ ಎಂದು ಜಾಥಾದಲ್ಲಿ ಭಾಗವಹಿಸಿದ್ದವರು ತಿಳಿಸಿದರು.|

ತಲಚೇರಿ-ಮೈಸೂರು ಮಾರ್ಗಕ್ಕೆ ಚಾಲನೆ ನೀಡುವುದರಿಂದ ಉತ್ತರ ಕೇರಳದ ವ್ಯವಸಾಯದಲ್ಲಿ ಬೆಳವಣಿಗೆಯಾಗುತ್ತದೆ. ಕಣ್ಣೂರು-ಬೆಂಗಳೂರು ಮಧ್ಯೆ ಇರುವ ಅಂತರ 708 ಕಿ.ಮೀ.ನಿಂದ 339 ಕಿ.ಮೀ. ಕಡಿಮೆ ಆಗಲಿದೆ. ಕಣ್ಣೂರಿನಿಂದ ನೇರವಾಗಿ ಹೈದರಾಬಾದ್, ತಿರುಪತಿ, ಹೌರಾ ಮುಂತಾದ ಸ್ಥಳಗಳಿಗೆ ತಲುಪಲು ಅನುಕೂಲವಾಗುವ ಜೊತೆಗೆ ಮಂಗಳೂರು ರಿಫೈನರಿಯಿಂದ ದಕ್ಷಿಣ ಭಾರತಕ್ಕೆ ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಿಸಲು ಸುಲಭವಾಗುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಸಿ.ದಾಸೇಗೌಡ, ತಲಚೇರಿ-ಮೈಸೂರು ರೈಲ್ವೆ ಲೈನ್ ಆಕ್ಷನ್ ಕೌನ್ಸಿಲ್‌ನ ಕಾರ್ಯಾಧ್ಯಕ್ಷ ಟಿ.ವಿ.ಗೋಪಿನಾಥ್, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಸಂಚಾಲಕರಾದ ಶಶಿಧರ್, ವಿಜಯನ್ ನಂಬಿಯಾರ್, ಚಂದ್ರಶೇಖರ್, ಜಯಲಕ್ಷ್ಮಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಮೂಗೂರು ನಂಜುಂಡಸ್ವಾಮಿ  ಜಾಥಾದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.