ಹಾಸನ: ನಾನು ಮುಂದಿನ ಲೋಕಸಭೆ ಚುನಾವಣೆಗೆ ನಿಲ್ಲುವುದಿಲ್ಲ. ನಾನು ವ್ಹೀಲ್ಚೇರ್ನಲ್ಲಿ ಸಂಸತ್ ಗೆ ಹೋಗಲು ಬಯಸುವುದಿಲ್ಲ ಎಂದು ಸಂಸದ ಎಚ್.ಡಿ.ದೇವೇಗೌಡ ಹೇಳಿದ್ದಾರೆ
ಜಿಲ್ಲೆಯ ಪಕ್ಷದ ನಾಯಕರ ಅಭಿಪ್ರಾಯ ಕೇಳುವೆ. ಹಿರಿಯ ನಾಯಕರಿಗೆ ಮೊದಲ ಆದ್ಯತೆ. ಅವರು ಸ್ಪರ್ಧೆ ಮಾಡದೇ ಹೋದರೆ ಮೊಮ್ಮಗ ಪ್ರಜ್ವಲ್ ನನ್ನು ಲೋಕಸಭೆಗೆ ಕಳಿಸಬೇಕು ಎಂಬ ಆಸೆ ಇದೆ. ಮೊಮ್ಮಗ ವಿದ್ಯಾವಂತ, ಕೊಂಚ ದುಡುಕು ಬುದ್ಧಿ ಅಷ್ಟೆ. ನನ್ನ ಬಿಟ್ಟು ಬೇರೆಯವರು ಸ್ಪರ್ಧೆ ಮಾಡಿದರೆ ಸ್ವಾಗತ. ಇಲ್ಲವಾದರೆ ಪ್ರಜ್ವಲ್ ನನ್ನು ಮಗನೆಂದು ತಿಳಿದು ಗೆಲ್ಲಿಸಲಿ.
ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಮುಂದುವರಿಕೆ ವಿಚಾರದ ಬಗ್ಗೆ ಮಾತನಾಡಿದ ಗೌಡರು, ರತ್ನಪ್ರಭಾ ಅವರು ಚುನಾವಣೆಯಲ್ಲಿ ನಿಷ್ಪಕ್ಷಪಾತವಾಗಿ ನಡೆದು ಕೊಳ್ಳಬೇಕು. ಇಲ್ಲವಾದರೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದಿದ್ದಾರೆ. ನಾನು ಚುನಾವಣಾ ಪೂರ್ವ ಸಮೀಕ್ಷೆ ನೋಡಿ ಸುಮ್ಮನೆ ಕೂರೋದಿಲ್ಲ. ಈ ಸಾರಿ ಕಾಂಗ್ರೆಸ್, ಬಿಜೆಪಿ ಬಿಟ್ಟು ಸರ್ಕಾರ ಮಾಡಲೇಬೇಕು ಎಂಬ ಹಠ ನನ್ನದು ಎಂದಿದ್ದಾರೆ.
113 ಸ್ಥಾನ ಗೆಲ್ಲುವುದು ನನ್ನ ಟಾರ್ಗೆಟ್
ಚುನಾವಣೆಗೆ ಇನ್ನೂ 45 ದಿನ ಇದೆ. ಇಷ್ಟೂ ದಿನ ವಿರಮಿಸದೇ ನಾನು ರಾಜ್ಯ ಸುತ್ತುತ್ತೇನೆ. ರಾಜ್ಯಕ್ಕೆ ನಾನೂ ಅಲ್ಪ ಸ್ವಲ್ಪ ಕೆಲಸ ಮಾಡಿದ್ದೇನೆ. ಸಾಮಾಜಿಕ ನ್ಯಾಯದ ಬಗ್ಗೆ ಬೇರೆಯವರಿಂದ ಹೇಳಿಸಿಕೊಳ್ಳಬೇಕಿಲ್ಲ. ನಮ್ಮಲ್ಲಿ ಹಣದ ಕೊರತೆ ಇದೆ.ಆದರೆ ಹೋರಾಟ ನಿಲ್ಲಲ್ಲ, ಪಕ್ಷ ತೊರೆಯುವವರ ಬಗ್ಗೆ ನಾನು ತಲೆ ಕೆಡಿಸಿ ಕೊಳ್ಳುವುದಿಲ್ಲ.ಕುಮಾರಸ್ವಾಮಿಯನ್ನು ನಾನು ಸಿಎಂ ಮಾಡಬೇಕು ಎನ್ನುತ್ತಿಲ್ಲ, ಜನರ ಬಾಯಲ್ಲಿ ಇದೆ.
ಅಮಿತ್ ಶಾ -ಮೈಸೂರು ರಾಜ ವಂಶಸ್ಥರ ಭೇಟಿ
ಅಮಿತ್ ಶಾ ಅವರು ಯಾವ ಕಾರಣಕ್ಕೆ ಹೋಗಿದ್ದಾರೋ ಗೊತ್ತಿಲ್ಲ ಎಂದ ಗೌಡರು ದಲಿತರ ಜೊತೆ ಶಾ ಭೋಜನದ ಬಗ್ಗೆ ಪ್ರಸ್ತಾಪಿಸಿ ಈಗಲಾದರೂ ಅವರಿಗೆ ಈ ಬುದ್ಧಿ ಬಂದಿದ್ದಕ್ಕೆ ಸಂತೋಷ.
ಇದು ನನ್ನ ಕೊನೆಯ ಚುನಾವಣೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಈ ರೀತಿಯ ಹೇಳಿಕೆಯನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳಬಾರದು. ಕಳೆದ ಬಾರಿಯೂ ಸಿದ್ದರಾಮಯ್ಯ ಹೀಗೇ ಹೇಳಿದ್ದರು. ಅವರ ಬಳಿ ಅಧಿಕಾರ ಇದೆ. ಅದಕ್ಕೆ ಯಾರು ಏನೇ ಮಾಡಿದರು ಗೆದ್ದೇ ಗೆಲ್ಲುವೆ ಎನ್ನುತ್ತಿದ್ದಾರೆ. ನಾನು ನಮ್ಮ ಅಭ್ಯರ್ಥಿ ಜಿ.ಟಿ.ದೇವೇಗೌಡರ ಪರ ಹೋರಾಟ ಮಾಡುವೆ ಎಂದು ಜೆಡಿಎಸ್ ವರಿಷ್ಠ ದೇವೇಗೌಡರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.