ADVERTISEMENT

ಪೊಲೀಸ್ ಗುಂಡಿನಿಂದಲೇ ಮಾನೆ ಸಾವು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 19:30 IST
Last Updated 17 ಅಕ್ಟೋಬರ್ 2011, 19:30 IST

ಮಂಗಳೂರು:  ನಕ್ಸಲ್ ನಿಗ್ರಹ ಪಡೆಯ (ಎಎನ್‌ಎಫ್) ಕಾನ್ಸ್‌ಟೆಬಲ್ ಮಹಾದೇವ ಎಸ್.ಮಾನೆ ಅವರ ನಿಗೂಢ ಸಾವಿನ ಬಗ್ಗೆ ನಡೆಸುತ್ತಿದ್ದ ತನಿಖೆ ಪೂರ್ಣಗೊಂಡಿದ್ದು, ಮೂವರು ಬೇಟೆಗಾರರನ್ನೇ ನಕ್ಸಲರೆಂದು ಭಾವಿಸಿದ ಯೋಧರು ಮಾನೆಯತ್ತ ತಪ್ಪಾಗಿ ಗುಂಡು ಹಾರಿಸಿದ್ದು ಬೆಳಕಿಗೆ ಬಂದಿದೆ.

ಬೆಳ್ತಂಗಡಿ ತಾಲ್ಲೂಕಿನ ಮಂಜೆಟ್ಟಿ ಗ್ರಾಮದ ಸೂರಪ್ಪ, ಮೋಹನ ಮತ್ತು ಹರೀಶ ಎಂಬವರು ತಾವು ಬೇಟೆಯಾಡುತ್ತ ಕಾಡಿಗೆ ಬಂದಿದ್ದನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.

ಈ ಮೂವರು ಬೇಟೆಗಾರರನ್ನು ನಕ್ಸಲರೆಂದು ಭಾವಿಸಿದ ಸ್ಥಳೀಯರು ಎಎನ್‌ಎಫ್ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದರು. ತಕ್ಷಣ ಅವರು ನಕ್ಸಲರ ವಿರುದ್ಧ ಕಾರ್ಯಾಚರಣೆಗೆ ಸಜ್ಜುಗೊಂಡರು. ಬೇಟೆಗಾರರು ಸಹ ಆತಂಕಗೊಂಡು ದಿಕ್ಕಾಪಾಲಾಗಿ ಓಡತೊಡಗಿದರು. ಯೋಧರು ಅವರತ್ತ ಗುಂಡು ಹಾರಿಸಿದಾಗ ಒಂದು ಗುಂಡು ಗುರಿ ತಪ್ಪಿ ಮಾನೆ ಅವರಿಗೆ ಬಡಿಯಿತು ಎಂದು ತನಿಖೆಯ ಸಂದರ್ಭದಲ್ಲಿ ಗೊತ್ತಾಗಿದೆ.

ಕಾಡಿನಲ್ಲಿ ಬೇಟೆಯಾಡುವುದಕ್ಕೆ ನಿಷೇಧ ಇರುವುದರಿಂದ ತಮ್ಮ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಬಹುದು ಎಂದು ಹೆದರಿ ತಾವು ಮೊದಲು ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ ಎಂದು ಈ ಬೇಟೆಗಾರರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.