ADVERTISEMENT

ಪ್ರತ್ಯೇಕ ಅಪಘಾತ: 10 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 19:30 IST
Last Updated 1 ಅಕ್ಟೋಬರ್ 2012, 19:30 IST

ಚಳ್ಳಕೆರೆ: ತಾಲ್ಲೂಕಿನ ತಳಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಎರಡು ಪ್ರತ್ಯೇಕ ಅಪಘಾತದಲ್ಲಿ ಒಂದೇ ಕುಟುಂಬದ 7 ಜನ ಸೇರಿ  10 ಮಂದಿ ಮೃತಪಟ್ಟಿದ್ದಾರೆ.

 ತಳಕು ಹತ್ತಿರದ ಗರಣಿ ಕ್ರಾಸ್‌ನ ಕಲ್ಪತರು ಪೆಟ್ರೋಲ್ ಬಂಕ್ ಹತ್ತಿರ ನಿಲ್ಲಿಸಿದ್ದ ಜೆಸಿಬಿ ವಾಹನಕ್ಕೆ ಬಳ್ಳಾರಿ ಕಡೆಯಿಂದ ಚಳ್ಳಕೆರೆಗೆ ಬರುತ್ತಿದ್ದ ಮಾರುತಿ ಜೆನ್ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ 7ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಬ್ಬರು ತೀವ್ರ ಗಾಯಗೊಂಡಿದ್ದಾರೆ.

ಮೃತರನ್ನು ಹೇಮಾವತಿ (42)  ಕಾವ್ಯಾ (11), ಹೇಮಂತ್ (7), ಕಿರಣಮ್ಮ (43), ಶ್ರೀನಿವಾಸ್ (47), ಜ್ಯೋತಿ (45), ಪುನೀತ್ (12) ಎಂದು ಗುರುತಿಸಲಾಗಿದೆ.  ಪದ್ಮಾವತಿ ಎಂಬುವವರು ತೀವ್ರ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.  ಇವರ್ಲ್ಲೆಲ ಬಳ್ಳಾರಿಯ ಕೌಲ್ ಬಜಾರಿನ ನಿವಾಸಿಗಳು. ಕಾರ್ಯನಿಮಿತ್ತ ಚಳ್ಳಕೆರೆಯಲ್ಲಿರುವ ಸಂಬಂಧಿಕರ ಮನೆಗೆ ಆಗಮಿಸುತ್ತ್ದ್ದಿದರು.

ಇಬ್ಬರು ಕಾರ್ಮಿಕರು ಸೇರಿ ಮೂವರ ಸಾವು: ಇನ್ನೊಂದು ಪ್ರಕರಣದಲ್ಲಿ, ಸೋಮವಾರ ಮುಂಜಾನೆ 2.45ರ ಸುಮಾರಿಗೆ ಬೆಂಗಳೂರಿನಿಂದ ಸುರಪುರಕ್ಕೆ ಹೊರಟಿದ್ದ ಟ್ರಾಕ್ಸ್ ಮತ್ತು ಬಳ್ಳಾರಿಯಿಂದ ಬೆಂಗಳೂರು ಕಡೆಗೆ ಹೊರಟಿದ್ದ ಲಾರಿ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಟ್ರಾಕ್ಸ್‌ನ ಚಾಲಕ ವಿನೋದ್ (28), ಕೂಲಿ ಕಾರ್ಮಿಕರಾದ ಅನುಸೂಯಬಾಯಿ (35), ಬಿ. ಯರಿಲಿಂಗಪ್ಪ(36) ಎಂಬುವವರು ಸ್ಥಳದಲ್ಲೇ ಮೃತಪಟ್ಟು ಇತರ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಅವರು ಭಾನುವಾರ ರಾತ್ರಿ ಬೆಂಗಳೂರಿನಿಂದ ತಮ್ಮ ಸ್ವಂತ ಊರುಗಳಾದ ಸುರಪುರ ತಾಲ್ಲೂಕಿನ ಜಂಬಲದಿನ್ನಿ, ತೋಳದಿನ್ನಿ, ಕಡದರಾಳು ಗ್ರಾಮಗಳಿಗೆ ಪ್ರಯಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.