ಬೆಂಗಳೂರು: ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ), ವಾಯವ್ಯ ಹಾಗೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರವನ್ನು ಒಂದೆರಡು ದಿನಗಳಲ್ಲಿ ಏರಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಎಂಟಿಸಿಯ ಪ್ರಯಾಣ ದರವನ್ನು ಈಗಾಗಲೇ ಶೇ 15ರಷ್ಟು ಏರಿಸಲಾಗಿದೆ. ಕೆಎಸ್ಆರ್ಟಿಸಿ ಮತ್ತು ಇತರ ಎರಡು ಸಂಸ್ಥೆಗಳು ಶೇ 15ರಷ್ಟು ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ ಶೇ 7– 8 ರಷ್ಟು ಏರಿಕೆ ಆಗಲಿದೆ’ ಎಂದು ಮಾಹಿತಿ ನೀಡಿದರು.
‘ಡೀಸೆಲ್ ದರದಲ್ಲಿ ಹೆಚ್ಚಳ ಹಾಗೂ ಸಿಬ್ಬಂದಿಯ ವೇತನ ಪ್ರಮಾಣದ ಹೆಚ್ಚಳ ಕಾರಣದಿಂದ ದರ ಏರಿಕೆ ಅನಿವಾರ್ಯ’ ಎಂದು ಸಮರ್ಥಿಸಿಕೊಂಡರು.
207 ಕೋಟಿ ಹೊರೆ: ಕೆಎಸ್ಆರ್ಟಿಸಿಗೆ 2013–14ನೇ ಸಾಲಿನಲ್ಲಿ ಡೀಸೆಲ್ ದರ ಏರಿಕೆಯಿಂದ ₨105 ಕೋಟಿ ಹಾಗೂ ತುಟ್ಟಿಭತ್ಯೆ ಪಾವತಿಯಿಂದ ₨102 ಕೋಟಿ ಹೆಚ್ಚುವರಿ ಹೊರೆ ಬಿದ್ದಿದೆ. ಮಾರ್ಚ್ ಅಂತ್ಯದ ವರೆಗೆ ಸುಮಾರು ₨80 ಕೋಟಿ ನಷ್ಟ ಅನುಭವಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.