ತೇರದಾಳ (ಬಾಗಲಕೋಟೆ): ಇಲ್ಲಿನ ಭಾಗ್ಯೋದಯ ಶಿಕ್ಷಣ ಸಂಸ್ಥೆ ಆವರಣದಲ್ಲಿ ಶನಿವಾರ ನಡೆದ, ಶಾಲಾ ದಾಖಲಾತಿ ಆಂದೋಲನ ಹಾಗೂ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ 100 ಶುದ್ಧ ಕುಡಿಯುವ ನೀರಿನ ಘಟಕಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಪಾಲ್ಗೊಂಡಿದ್ದರು. ಸಚಿವರನ್ನು ಸ್ವಾಗತಿಸಲು ಶಾಲೆಯ ಬಾಲಕಿಯರು ಪೂರ್ಣಕುಂಭ ಹೊತ್ತು ನಿಂತಿದ್ದರು.
ಇದಕ್ಕೂ ಮುನ್ನ ಸಚಿವರನ್ನು ಕಾರ್ಯಕ್ರಮದ ವೇದಿಕೆಯವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಸ್ಥಳೀಯ ಶಾಸಕಿಯೂ ಆಗಿರುವ
ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಕೂಡ ತನ್ವೀರ್ ಸೇಠ್ ಜೊತೆಗಿದ್ದರು. ಈ ವೇಳೆ ಆ ಬಾಲಕಿಯರೂ ಹೆಜ್ಜೆ ಹಾಕಿದರು.
ಉತ್ತರ ಕರ್ನಾಟಕದ ಸಾಂಸ್ಕೃತಿಕ ಸೊಗಡನ್ನು ಪ್ರತಿನಿಧಿಸಿದ್ದ ಬಾಲೆಯರು, ಸಾಂಪ್ರದಾಯಿಕ ಸೀರೆಯುಟ್ಟಿದ್ದರು. ಕೈಗೆ ಬಳೆ, ಮೂಗಿಗೆ ನತ್ತು, ಕಿವಿಯೋಲೆ ಸೇರಿದಂತೆ ವೈವಿಧ್ಯಮಯ ಆಭರಣಗಳಿಂದ ಅಲಂಕೃತರಾಗಿದ್ದರು. ಆದರೆ ಕೊರಳಲ್ಲಿ ರಾರಾಜಿಸುತ್ತಿದ್ದ ಸಿದ್ಧ ಮಂಗಳಸೂತ್ರಗಳು (ರೆಡಿಮೇಡ್ ತಾಳಿ) ಎಲ್ಲರ ಗಮನ ಸೆಳೆದವು. ಇದು ಅಲ್ಲಿ ನೆರೆದವರಲ್ಲಿ ಚರ್ಚೆಗೂ ಗ್ರಾಸವಾಯಿತು.
‘ಕಾರ್ಯಕ್ರಮದ ಗಡಿಬಿಡಿಯಲ್ಲಿ ನಾನು ಅದನ್ನು ಗಮನಿಸಿಲ್ಲ. ತಪ್ಪಾಗಿದ್ದರೆ ಆ ಬಗ್ಗೆ ಪರಿಶೀಲನೆ ನಡೆಸುವೆ’ ಎಂದು ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೈ.ಕುಂದರಗಿ ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.