ADVERTISEMENT

ಭಾರತೀಯ ವಿದ್ಯಾಭವನದಲ್ಲಿ ವೇದಗಳ ಅಧ್ಯಯನ ಕೇಂದ್ರ: ಚಿಂತನೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2013, 19:54 IST
Last Updated 2 ಜುಲೈ 2013, 19:54 IST

ಬೆಂಗಳೂರು: `ವೇದಗಳ ಅಧ್ಯಯನಕ್ಕೆ ಸೂಕ್ತ ವೇದಿಕೆ ಒದಗಿಸುವ ಉದ್ದೇಶದಿಂದ ಮುಂಬರುವ ದಿನಗಳಲ್ಲಿ ವೇದ ಅಧ್ಯಯನ ಕೇಂದ್ರ ಆರಂಭಿಸುವ ಚಿಂತನೆ ನಡೆದಿದೆ'   ಎಂದು ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್.ಸುರೇಶ್ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಭವನದ ಅಮೃತ ಮಹೋತ್ಸವದ ಅಂಗವಾಗಿ ಇಸ್ಕಾನ್ ಸಂಸ್ಥೆಯ ಸಹಯೋಗದಲ್ಲಿ ವೇದ ಸಂವಾದ ಶೀರ್ಷಿಕೆಯೊಂದಿಗೆ ವೇದವಾಙ್ಮಯದ ರಾಷ್ಟ್ರೀಯ ಸಮ್ಮೆಳನವನ್ನು ಜುಲೈ 21ರಿಂದ 28ರವರೆಗೆ ಸಂಸ್ಥೆಯ ಮಲ್ಟಿವಿಷನ್ ಥಿಯೇಟರ್‌ನಲ್ಲಿ ಏರ್ಪಡಿಸಲಾಗಿದೆ. ಸಮ್ಮೇಳನದ ಫಲಿತಾಂಶದ ಆಧಾರದ ಮೇಲೆ ಅಧ್ಯಯನ ಕೇಂದ್ರ ಆರಂಭಿಸುವ ಬಗ್ಗೆ ತೀರ್ಮಾನಿಸಲಾಗುವುದು' ಎಂದರು.

`ಒಟ್ಟು ಎಂಟು ದಿನ ನಡೆಯಲಿರುವ ಸಮ್ಮೇಳನವನ್ನು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಸಮ್ಮೇಳನ ಉದ್ಘಾಟಿಸುವರು.

ಸಮ್ಮೇಳನದ ವಿವಿಧ ಗೋಷ್ಠಿಗಳಲ್ಲಿ 12ಕ್ಕೂ ಹೆಚ್ಚು ರಾಜ್ಯಗಳ ಪ್ರತಿನಿಧಿಗಳು ಮತ್ತು 160ಕ್ಕೂ ಹೆಚ್ಚು ವಿದ್ವಾಂಸರು ಭಾಗವಹಿಸುವರು. ಮುಸ್ಲಿಂ, ಸಿಖ್, ಕ್ರಿಶ್ಚಿಯನ್ ಮತ್ತು ಹಿಂದು ಧರ್ಮದ ವೇದ ವಿದ್ವಾಂಸರುಗಳೂ ತಮ್ಮ ಅಭಿಪ್ರಾಯಗಳನ್ನು ಮಂಡಿಸುವರು' ಎಂದರು.

`ವೇದಗಳ ಚಲನಚಿತ್ರ ಪ್ರದರ್ಶನ, ವೇದ ವಾಙ್ಮಯದ ಹಸ್ತಪ್ರತಿ, ಸಿ.ಡಿ., ಡಿ.ವಿ.ಡಿ. ಮತ್ತು ಗ್ರಂಥಗಳ ಪ್ರದರ್ಶನ ಸಮ್ಮೇಳನದ ವಿಶೇಷ. ಜುಲೈ 28ರಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ.ಮಲ್ಲೇಪುರಂ ಜಿ.ವೆಂಕಟೇಶ್ ಸಮ್ಮೇಳನದ ಸಮಾರೋಪ ಭಾಷಣ ಮಾಡುವರು. ರಾಮಕೃಷ್ಣ ಮಠದ ಹರ್ಷಾನಂದ ಸ್ವಾಮೀಜಿ ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು' ಎಂದು ಕಾರ್ಯದರ್ಶಿ ಕೆ.ಜಿ.ರಾಘವೇಂದ್ರ ಮಾಹಿತಿ ನೀಡಿದರು.

ಆಸಕ್ತರು ಭಾರತೀಯ ವಿದ್ಯಾಭವನದ ಕಚೇರಿಯಲ್ಲಿ ಸಮ್ಮೇಳನದ ಆಹ್ವಾನ ಪತ್ರಿಕೆ ಪಡೆದುಕೊಳ್ಳಬಹುದು. ಮಾಹಿತಿಗೆ ದೂರವಾಣಿ: 080-22267421, 22267303 ಸಂಪರ್ಕಿಸಬಹುದು ಎಂದರು.

ಗೋಷ್ಠಿಯಲ್ಲಿ ಸಮ್ಮೇಳನದ ಸಂಯೋಜಕ ಜಿ.ಎಸ್.ರಾಧಾಕೃಷ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.