ಧಾರವಾಡ: ಕುಟುಂಬದ ಆರೋಗ್ಯ ಹಾಗೂ ಮರ್ಯಾದೆಯ ದೃಷ್ಟಿಯಿಂದ ಪ್ರತಿಯೊಬ್ಬ ಮಹಿಳೆ ತಮ್ಮ ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವರಿ ಸಚಿವ ಜಗದೀಶ ಶೆಟ್ಟರ ಸಲಹೆ ನೀಡಿದರು.
ತಾಲ್ಲೂಕಿನ ಬೇಲೂರು ಗ್ರಾಮದಲ್ಲಿ ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಹಾಗೂ ಟಾಟಾ ಮಾರ್ಕೊಪೋಲೊ ಕಂಪೆನಿಯ ಸಹಯೋಗದಲ್ಲಿ ನಿರ್ಮಿಸಿದ 164 ಶೌಚಾಲಯಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿ, 1.8 ಲಕ್ಷ ರೂ. ವೆಚ್ಚದಲ್ಲಿ ಕೊರೆದ ಕುಡಿಯುವ ನೀರಿನ ಕೊಳವೆ ಬಾವಿಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಫಲಾನುಭವಿಗಳಿಗೆ ಸಹಾಯಧನದ ಚೆಕ್ಗಳನ್ನು ಅವರು ವಿತರಿಸಿದರು. ಗ್ರಾಮೀಣ ಭಾಗದಲ್ಲಿ ಜನಜೀವನ ಸುಂದರವಾಗಲು ಮಹಿಳೆ ಮುಂದೆ ಬಂದು ಕ್ರಾಂತಿಕಾರಕ ಬದಲಾವಣೆ ತರಬೇಕು. ಈ ವರ್ಷ ಜಿಲ್ಲೆಯಲ್ಲಿ ನೈರ್ಮಲ್ಯ ಗ್ರಾಮ ಪುರಸ್ಕಾರಕ್ಕೆ ಶಿವಳ್ಳಿ ಹಾಗೂ ಬೇಲೂರು ಗ್ರಾಮ ಪಂಚಾಯಿತಿ ಸೇರಿದಂತೆ ಹೆಚ್ಚಿನ ಗ್ರಾ.ಪಂ. ಗಳು ಬರಲಿವೆ ಎಂದರು.
ಬೇಲೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಈ ಮಾರ್ಕೊಪೋಲೊ ಕಂಪೆನಿಗೆ ಭೂಮಿ ನೀಡಿದ್ದು, ಆ ಗ್ರಾಮಗಳಲ್ಲಿಯ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವ ಜೊತೆಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿದ್ದಕ್ಕೆ ಅಭಿನಂದಿಸಿದರು. ಈ ಕಂಪೆನಿಯಿಂದ ಇನ್ನೂ ಹೆಚ್ಚಿನ ಕೆಲಸಗಳನ್ನು ತೆಗೆದುಕೊಳ್ಳಲು ಸದ್ಯವೇ ಸಭೆ ಕರೆದು ಚರ್ಚಿಸಲಾಗುವುದು ಎಂದರು.
ಶಾಸಕಿ ಸೀಮಾ ಮಸೂತಿ ಅಧ್ಯಕ್ಷತೆ ವಹಿಸಿದ್ದರು. ಬೇಲೂರು ಗ್ರಾ.ಪಂ .ಅಧ್ಯಕ್ಷ ಕಲ್ಲಪ್ಪ ಸಂದೂರ, ತಾ.ಪಂ. ಸದಸ್ಯ ದಶರಥ ದೇಸಾಯಿ ಮಾತನಾಡಿದರು. ಟೆಲ್ಕಾನ್ ಕಂಪೆನಿಯ ಮುಖ್ಯಸ್ಥ ಆರ್.ಎ.ರಾವ್, ಶರ್ಮ ಮತ್ತಿತರರು ಉಪಸ್ಥಿತರಿದ್ದರು.
ಮಾರ್ಕೊಪೋಲೊ ಕಂಪೆನಿಯ ಮಾನವ ಸಂಪನ್ಮೂಲ ಅಧಿಕಾರಿ ಆರ್.ಕೆ. ಪ್ರಸಾದ ಮಾತನಾಡಿ, ಈ ಭಾಗದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳ ಮಾಹಿತಿ ನೀಡಿದರು. ಎಸ್.ಆರ್. ಬೆಟದೂರ ಸ್ವಾಗತಿಸಿದರು. ಬಾಬು ತರಕಣ್ಣವರ ನಿರೂಪಿಸಿದರು. ರಮೇಶ ಬಿಜಾಪುರ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.