ನವದೆಹಲಿ: ಮುಖ್ಯಮಂತ್ರಿ ಹುದ್ದೆಗಾಗಿ ಪಟ್ಟುಹಿಡಿದಿರುವ ಯಡಿಯೂರಪ್ಪನವರಿಗೆ ದೆಹಲಿ ವರಿಷ್ಠರಿಂದ ಬುಧವಾರ ಮಧ್ಯರಾತ್ರಿವರೆಗೂ ಯಾವುದೇ ಖಚಿತ ಭರವಸೆ ಸಿಗಲಿಲ್ಲ.
ರಾಜ್ಯದ ವಿದ್ಯಮಾನ ಕುರಿತು ಚರ್ಚಿಸಲು ಬಿಜೆಪಿ ಮುಖಂಡರಾದ ನಿತಿನ್ ಗಡ್ಕರಿ, ಅರುಣ್ಜೇಟ್ಲಿ ಮತ್ತು ಧರ್ಮೇಂದ್ರ ಪ್ರಧಾನ್ ಸೇರಿದ್ದರಾದರೂ ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ಗಡ್ಕರಿ ಮನೆಯತ್ತ ತಲೆ ಹಾಕಲಿಲ್ಲ.
ಮಧ್ಯರಾತ್ರಿ 12.45ರ ಸುಮಾರಿಗೆ ದೆಹಲಿ ವಿಮಾನದಲ್ಲಿ ಬಂದಿಳಿದ ಮುಖ್ಯಮಂತ್ರಿ ಸದಾನಂದಗೌಡ ಮತ್ತು ಕೆ.ಎಸ್ ಈಶ್ವರಪ್ಪ, ಸರ್ಕಾರ ಮತ್ತು ಪಕ್ಷದ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ.
ಈ ವಿಷಯದಲ್ಲಿ ಈಗಾಗಲೇ ಹೈಕಮಾಂಡ್ ಸ್ಪಷ್ಟವಾದ ಸೂಚನೆ ನೀಡಿದೆ. ಆರ್ಎಸ್ಎಸ್ ಕೂಡಾ ಬಿಜೆಪಿ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿಯಾಗಿ ಸದಾನಂದಗೌಡ ಮುಂದುವರಿಕೆ, ಉಪಮುಖ್ಯಮಂತ್ರಿಯಾಗಿ ಈಶ್ವರಪ್ಪ ನೇಮಕ, ಯಡಿಯೂರಪ್ಪನವರಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ನೀಡುವ ಕುರಿತು ಯಾವುದೇ ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಪಕ್ಷಕ್ಕೆ ಒಳ್ಳೆಯದಾಗುವುದಾದರೆ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡಲು ಸಿದ್ಧ. ಆದರೆ ಯಾರ್ಯಾರೋ ಕೇಳಿದರೆ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಕೊಡುವುದಿಲ್ಲ. ಅಂಥ ಪರಿಸ್ಥಿತಿಯೂ ಉದ್ಭವಿಸಿಲ್ಲ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.
ಗಡ್ಕರಿ ಬೆಂಗಳೂರಿನಲ್ಲಿ ಜಾತಿ ರಾಜಕಾರಣ, ಶಿಸ್ತು ಉಲ್ಲಂಘನೆ ಮಾಡುವುದರ ವಿರುದ್ಧ ಎಚ್ಚರಿಕೆ ನೀಡಿದ ಬಳಿಕವೂ ಕೆಲವರು ಸುಧಾರಿಸಿಲ್ಲ. ಮೇಲಿಂದ ಮೇಲೆ ದೆಹಲಿ ಬರುವ ಮೂಲಕ ಹೈಕಮಾಂಡ್ ಒಲವು ತಮ್ಮ ಕಡೆಗಿದೆ ಎಂದು ನಿರೂಪಿಸಲು ಹೊರಟಿದ್ದಾರೆ. ಇದು ನಡೆಯುವುದಿಲ್ಲ ಎಂದು ಕಿಡಿಕಾರಿದರು.
ಯಾರೂ ನಮ್ಮನ್ನು ದೆಹಲಿಗೆ ಬರುವಂತೆ ಕರೆದಿಲ್ಲ. ನಾವೇ ಬಂದಿದ್ದೇವೆ. ಗುರುವಾರ ಎಲ್ಲಾ ಮುಖಂಡರನ್ನು ಭೇಟಿ ಮಾಡಿ ವಿದ್ಯಮಾನಗಳನ್ನು ವಿವರಿಸುತ್ತೇವೆ ಎಂದು ಸದಾನಂದ ಗೌಡರು ಹೇಳಿದರು.
ರಾಜ್ಯಸಭೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಯಾರೂ ಬಂಡಾಯ ಅಭ್ಯರ್ಥಿಯನ್ನು ನಿಲ್ಲಿಸಿದರು. ಯಾರು ಶಾಸಕರನ್ನು ರೆಸಾರ್ಟ್ಗೆ ಕರೆದೊಯ್ದು ಪಕ್ಷ ವಿರೋಧಿ ಚಟುವಟಿಕೆ ನಡೆಸಿದರು ಎಂಬ ಅಂಶಗಳನ್ನು ವರಿಷ್ಠರಿಗೆ ಮನವರಿಕೆ ಮಾಡಿಕೊಡಲು ಮುಖ್ಯಮಂತ್ರಿ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷರು ಬಯಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.