ಉಡುಪಿ: ‘ಮುಸ್ಲಿಂ ಸಮುದಾಯ ಯಾರೊಬ್ಬರ ಕಿಸೆಯಲ್ಲಿ ಇಲ್ಲ. ಯಾರು ಯೋಗ್ಯರು ಎಂಬುದನ್ನು ಜನರು ತೀರ್ಮಾನಿಸುತ್ತಾರೆ. ಹೈಕಮಾಂಡ್ ಎಲ್ಲ ವಿವರಗಳನ್ನು ಪಡೆದುಕೊಂಡೇ ನನಗೆ ಸಚಿವ ಸ್ಥಾನ ನೀಡಿದೆ’ ಎಂದು ನಗರಾಭಿವೃದ್ಧಿ ಹಾಗೂ ವಸತಿ ಖಾತೆ ಸಚಿವ ಯು.ಟಿ.ಖಾದರ್ ಹೇಳಿದರು.
ಸಚಿವ ಸ್ಥಾನಕ್ಕೆ ಖಾದರ್ ಯೋಗ್ಯರಲ್ಲ ಎಂಬ ಶಾಸಕ ತನ್ವೀರ್ ಸೇಠ್ ನೀಡಿದ ಹೇಳಿಕೆಗೆ ಗುರುವಾರ ಉಡುಪಿ ತಾಲ್ಲೂಕಿನ ಉದ್ಯಾವರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ‘ತನ್ವೀರ್ ಸೇಠ್ ಹೇಳಿಕೆ ಗಮನಕ್ಕೆ ಬಂದಿಲ್ಲ. ನಾನು ಯಾರ ಸಚಿವ ಸ್ಥಾನವನ್ನೂ ತಪ್ಪಿಸಿಲ್ಲ. ಯಾರಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಬಹುಶಃ ಸೇಠ್ ಅವರಿಗೆ ನನ್ನ ಮೇಲಿನ ಪ್ರೀತಿ ಹೆಚ್ಚಾಗಿ ಇಂತಹ ಹೇಳಿಕೆ ನೀಡಿರಬಹುದು’ ಎಂದು ವ್ಯಂಗ್ಯವಾಡಿದರು.
‘ರಾಜಕೀಯ ಜೀವನದಲ್ಲಿ ಶಾಸಕನಾಗಿ, ಮಂತ್ರಿಯಾಗಿ, ಜನರ ಸೇವಕನಾಗಿ ಕೆಲಸ ಮಾಡಿದ್ದೇನೆ. ಹಿಂದೆ ಕೊಟ್ಟಂತಹ ಎರಡು ಇಲಾಖೆಗಳಲ್ಲಿ ವಿವಾದಗಳು, ಕಪ್ಪುಚುಕ್ಕೆ ಇಲ್ಲದಂತೆ ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಕಳೆದ ಬಾರಿ ಕೂಡ ಪ್ರಥಮ ಹಂತದ ಸಂಪುಟ ವಿಸ್ತರಣೆ ವೇಳೆಯೇ ಸಚಿವ ಸ್ಥಾನ ಸಿಕ್ಕಿತ್ತು. ಪಕ್ಷ ಹಾಗೂ ಜನರು ಇಟ್ಟಿರುವ ನಂಬಿಕೆಗೆ ಅನುಗುಣವಾಗಿ ಕೆಲಸ ಮಾಡಿಕೊಂಡು ಹೋಗುತ್ತೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.