ADVERTISEMENT

ಯುವಜನತೆ ರಾಜಕೀಯಕ್ಕೆ ಬನ್ನಿ: ವರುಣ್

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2012, 19:30 IST
Last Updated 21 ಫೆಬ್ರುವರಿ 2012, 19:30 IST

ಸುಬ್ರಹ್ಮಣ್ಯ: ~ದೇಶದ ಅಭ್ಯುದಯಕ್ಕೆ ಯುವಜನರ ಸಕ್ರಿಯ ಸಹಭಾಗಿತ್ವ ಅಗತ್ಯ. ಸ್ವಚ್ಛ ಹಾಗೂ ಪಾರದರ್ಶಕ ಆಡಳಿತಕ್ಕಾಗಿ ಯುವಜನರು ರಾಜಕೀಯ ಕ್ಷೇತ್ರದತ್ತ ಒಲವು ತೋರಬೇಕು~ ಎಂದು ಬಿಜೆಪಿ ಯುವ ನಾಯಕ ವರುಣ್ ಗಾಂಧಿ ಹೇಳಿದರು.

ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಮಂಗಳವಾರ ಭೇಟಿ ನೀಡಿ ದೇವರ ದರ್ಶನ ಪಡೆದ ನಂತರ ಪತ್ರಕರ್ತರ ಜತೆ ಮಾತನಾಡಿದ ಪಿಲಿಭಿತ್ ಕ್ಷೇತ್ರದ ಲೋಕಸಭೆ ಸದಸ್ಯರೂ ಆಗಿರುವ ವರುಣ್, ~ಜನರು ನನ್ನ ಅಭಿಮಾನಿಯಾಗುವುದಕ್ಕೆ ಬದಲು ನಾನು ಜನರ ಅಭಿಮಾನಿಯಾಗಿರಲು ಇಷ್ಟಪಡುವೆ~ ಎಂದರು.

ಆಪ್ತರಾದ ಬೆಂಗಳೂರಿನ ಕಾಮೇಶ್ವರ ವರ್ಮ ಮತ್ತು ಅನುಭವ್ ಪೋದ್ದಾರ್ ಜತೆ ಸೋಮವಾರ ರಾತ್ರಿ ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದ ವರುಣ್ ಗಾಂಧಿ, ಇಲ್ಲಿನ ಖಾಸಗಿ ವಸತಿಗೃಹದಲ್ಲಿ ತಂಗಿದ್ದರು. ಮಂಗಳವಾರ ಬೆಳಿಗ್ಗೆ ವಿಶೇಷ ಭದ್ರತೆಯಲ್ಲಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿ ಶೇಷಸೇವೆ, ಆಶ್ಲೇಷ ಬಲಿ, ಪಂಚಾಮೃತ ಮಹಾಭಿಷೇಕ ಸೇವೆ ಸಲ್ಲಿಸಿದರು.

ಬಳಿಕ ನರಸಿಂಹ ಸ್ವಾಮಿ ಮಠ ಹಾಗೂ ಹೊಸಳಿಗಮ್ಮ ಗುಡಿಗೂ ಭೇಟಿ ನೀಡಿದರು. ದೇವಸ್ಥಾನದಲ್ಲಿ ಉಪಹಾರ ಸೇವಿಸಿ ಆದಿಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.