ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂದಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾಗೆ ವಿಶೇಷ ಆತಿಥ್ಯ ನೀಡಲು ಲಂಚ ನೀಡಲಾಗಿದೆ ಎಂಬ ಆರೋಪ ಹಾಗೂ ಕಾರಾಗೃಹಗಳಲ್ಲಿನ ಅವ್ಯವಹಾರ ಕುರಿತಂತೆ ಇಲಾಖೆಯ ಡಿಐಜಿ ಡಿ.ರೂಪಾ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ಕಾರಾಗೃಹಗಳ ಮಹಾನಿರೀಕ್ಷಕ ಸತ್ಯನಾರಾಯಣರಾವ್ ನಡುವೆ ಜಟಾಪಟಿ ಏರ್ಪಟ್ಟಿದೆ.
ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಇಲಾಖೆಯ ಡಿಐಜಿ ಡಿ.ರೂಪಾ ಅವರು ಸತ್ಯನಾರಾಯಣರಾವ್ ಅವರಿಗೆ ಬರೆದಿದ್ದ ಪತ್ರ ಬುಧವಾರ ಬಹಿರಂಗಗೊಂಡಿತ್ತು.
ರೂಪಾ ಅವರ ಪತ್ರದ ಬಗ್ಗೆ ಪ್ರತಿಕ್ರಿಯಿಸಿರುವ ಸತ್ಯನಾರಾಯಣರಾವ್, ‘ನಾನು ಯಾರಿಂದಲೂ ಲಂಚ ಪಡೆದಿಲ್ಲ. ಜೈಲುಗಳ ಬಗ್ಗೆ ರೂಪಾ ಅವರಿಗೆ ಸರಿಯಾದ ಮಾಹಿತಿ ಇಲ್ಲ. ಅವರು ಬಾಯಿಗೆ ಬಂದಂತೆ ಪತ್ರ ಬರೆದಿದ್ದಾರೆ’ ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ರೂಪಾ, ‘ಕಾರಾಗೃಹಗಳಲ್ಲಿನ ಅವ್ಯವಹಾರದ ಬಗ್ಗೆ ನಾನು ಹಿರಿಯ ಅಧಿಕಾರಿಗಳಿಗೆ ವರದಿ ನೀಡಿದ್ದೇನೆ. ನಾನು ಸತ್ಯನಾರಾಯಣರಾವ್ ಅವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿಲ್ಲ. ನನ್ನಿಂದ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ’ ಎಂದು ಹೇಳಿದ್ದಾರೆ.
ಈ ಪತ್ರದ ಪ್ರತಿಯನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತಾ, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ, ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಖುಂಟಿಅ ಅವರಿಗೂ ರೂಪಾ ಕಳುಹಿಸಿದ್ದಾರೆ.
ಇದನ್ನೂ ಓದಿ...
ಶಶಿಕಲಾ ವಿಶೇಷ ಆತಿಥ್ಯಕ್ಕೆ ₹2 ಕೋಟಿ ಲಂಚ!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.