ADVERTISEMENT

ಶಿವಕುಮಾರ ಸ್ವಾಮೀಜಿ 111ನೇ ಜನ್ಮದಿನೋತ್ಸವ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 19:30 IST
Last Updated 30 ಮಾರ್ಚ್ 2018, 19:30 IST
ಶಿವಕುಮಾರ ಸ್ವಾಮೀಜಿ
ಶಿವಕುಮಾರ ಸ್ವಾಮೀಜಿ   

ತುಮಕೂರು: ಇಲ್ಲಿನ ಸಿದ್ಧಗಂಗಾ ಮಠದ ಆವರಣದಲ್ಲಿ ಭಾನುವಾರ (ಏ. 1) ಶಿವಕುಮಾರ ಸ್ವಾಮೀಜಿಯವರ 111ನೇ ಜನ್ಮ ದಿನೋತ್ಸವ ಮತ್ತು ಗುರುವಂದನಾ ಮಹೋತ್ಸವ ನಡೆಯಲಿದೆ ಎಂದು ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ ಹೇಳಿದರು.

ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಗಣ್ಯರಿಗೆ ಅಥವಾ ರಾಜಕೀಯ ವ್ಯಕ್ತಿಗಳಿಗೆ ವಿಶೇಷ ಆಹ್ವಾನವನ್ನು ನೀಡಿಲ್ಲ. ಆದರೆ ಅವರು ಬಂದು ಸ್ವಾಮೀಜಿಯವರ ಆಶೀರ್ವಾದ ಪಡೆದುಕೊಳ್ಳಬಹುದು. ಕಾರ್ಯಕ್ರಮದಲ್ಲಿ ಸುಮಾರು 1.5 ಲಕ್ಷ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಜನ್ಮದಿನೋತ್ಸವದ ಪ್ರಯುಕ್ತ ಶಿವಕುಮಾರ ಸ್ವಾಮೀಜಿ ಅವರಿಗೆ ಸಾಮೂಹಿಕ ಪಾದಪೂಜೆ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ. ಆದರೆ ಈ ಬಾರಿ ಯಾರಿಗೂ ಕೂಡ ಸ್ವಾಮೀಜಿಯವರ ಪ್ರತ್ಯೇಕ ಭೇಟಿಯ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.

ADVERTISEMENT

ಸ್ವಾಮೀಜಿ ಜನ್ಮದಿನೋತ್ಸವದ ದಿನದಂದು ಬೆಳಿಗ್ಗೆ 7ರಿಂದ 11ರವರೆಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 11ರಿಂದ ರಾತ್ರಿ 11ರ ವರೆಗೆ ನಿರಂತರವಾಗಿ ಪ್ರಸಾದ (ಊಟ) ವ್ಯವಸ್ಥೆ ಮಾಡಲಾಗಿದ್ದು, ಮಠದ ಬೇರೆ ಬೇರೆ ಕಟ್ಟಡಗಳಲ್ಲಿ 9 ಕೌಂಟರ್‌ಗಳನ್ನು ತೆರೆಯಲಾಗುತ್ತದೆ ಎಂದು ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕ ಚನ್ನಬಸಪ್ಪ ತಿಳಿಸಿದರು.

ಬಮುಲ್‌ನಿಂದ 3,500 ಲೀ ಹಾಲು
ಜನ್ಮದಿನೋತ್ಸವ ದಿನದ ಅಡುಗೆಗೆ ಬೆಂಗಳೂರು ಹಾಲು ಒಕ್ಕೂಟ (ಬಮುಲ್‌) 3,500 ಲೀ ಹಾಲು, 500 ಲೀ ಮೊಸರು, 25,000 ಪ್ಯಾಕೆಟ್‌ ಮಜ್ಜಿಗೆ ಮತ್ತು 40 ಟಿನ್‌ ತುಪ್ಪವನ್ನು ನೀಡುವುದಾಗಿ ಹೇಳಿದೆ ಎಂದು ವಿಶ್ವನಾಥಯ್ಯ ತಿಳಿಸಿದರು.

ತುಮಕೂರು ಹಾಲು ಒಕ್ಕೂಟ ಕೂಡ ಹಾಲು ಮತ್ತು ಮೊಸರನ್ನು ನೀಡುವುದಾಗಿ ತಿಳಿಸಿದ್ದು, ಎಷ್ಟು ಪ್ರಮಾಣದಲ್ಲಿ ನೀಡುತ್ತಾರೆ ಎನ್ನುವ ಬಗ್ಗೆ ಸ್ಪಷ್ಟಪಡಿಸಿಲ್ಲ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.