ಧಾರವಾಡ: ‘ರಾಜ್ಯದಲ್ಲಿ ಸಾಂಸ್ಕೃತಿಕ ನೀತಿಯನ್ನು ಸರ್ಕಾರ ರೂಪಿಸುವ ಅಗತ್ಯವಿಲ್ಲ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿರುವ ಕಾನೂನು ತೆಗೆದುಹಾಕಲು ಸಾಹಿತಿಗಳೆಲ್ಲ ಒಟ್ಟಾಗಿ ಕೋರ್ಟ್ನಲ್ಲಿ ದಾವೆ ಹೂಡಬೇಕು’ ಧಾರವಾಡ ಸಾಹಿತ್ಯ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ವ್ಯಕ್ತಪಡಿಸಿದ ಸ್ಪಷ್ಟವಾದ ಅಭಿಪ್ರಾಯಗಳಿವು.
‘ಸದ್ಯದ ಸರ್ಕಾರ ಸಾಂಸ್ಕೃತಿಕ ನೀತಿಯನ್ನು ರೂಪಿಸಲು ಸಮಿತಿ ರಚಿಸಿದೆ. ಸಾಂಸ್ಕೃತಿಕ ನೀತಿಗೂ ಸರ್ಕಾರಕ್ಕೂ ಏನು ಸಂಬಂಧ? ಈ ಸಂಗತಿಯಲ್ಲಿ ಅದು ಏಕೆ ತಲೆ ಹಾಕಬೇಕು’ ಎಂದು ಅವರು ಪ್ರಶ್ನಿಸಿದರು.
‘ಸಾಹಿತ್ಯ, ಸಂಗೀತ, ನೃತ್ಯ, ಜಾನಪದ ಮತ್ತಿತರ ಸಾಂಸ್ಕೃತಿಕ ಕ್ಷೇತ್ರಗಳು ಸರ್ಕಾರದಿಂದ ಪಡೆದಿರುವುದಾದರೂ ಏನು? ಈ ಕ್ಷೇತ್ರಗಳ ಮೇಲೆ ಅದು ಸವಾರಿ ಮಾಡುವ ಅಗತ್ಯವಾದರೂ ಏನು’ ಎಂದು ಕೇಳಿದರು.
‘ಪ್ರತಿವರ್ಷ ಒಂದಿಷ್ಟು ಜನ ಸಾಹಿತಿಗಳಿಗೆ ಪ್ರಶಸ್ತಿ ನೀಡುವುದು ಮತ್ತು ಅವರ ಮಧ್ಯೆ ಹೊಟ್ಟೆಕಿಚ್ಚು ಉಂಟು ಮಾಡುವುದಷ್ಟೇ ಸರ್ಕಾರದ ಕೆಲಸವಾಗಿದೆ’ ಎಂದು ಅಭಿಪ್ರಾಯಪಟ್ಟರು.
‘ವಿಶ್ವವಿದ್ಯಾಲಯಗಳಲ್ಲಿ ಸಂಗೀತ ವಿಭಾಗಗಳಿವೆ. ಸಂಗೀತಕ್ಕೂ ಒಂದು ವಿ.ವಿ ಇದೆ. ಯಾವ ವಿ.ವಿ ಕೂಡ ಇದುವರೆಗೆ ಒಬ್ಬ ಸಂಗೀತಗಾರನನ್ನೂ ಸೃಷ್ಟಿ ಮಾಡಿಲ್ಲ. ಸಾಂಪ್ರದಾಯಿಕ ಪದ್ಧತಿಯಲ್ಲೇ ಕಲಿತವರು ಸಂಗೀತಗಾರರಾಗಿ ಹೊರಹೊಮ್ಮಿದ್ದಾರೆ. ಚೆನ್ನಾಗಿ ಹಾಡುವವರನ್ನು ಜನರೇ ಗುರುತಿಸುತ್ತಾರೆ. ಸಾಂಸ್ಕೃತಿಕ ವಿಷಯಗಳನ್ನು ಜನರ ತೀರ್ಮಾನಕ್ಕೇ ಬಿಡಬೇಕು’ ಎಂದು ತಿಳಿಸಿದರು. ‘ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಕಾನೂನಿನ ಅಸ್ತ್ರ ಬಳಕೆ ಮಾಡುತ್ತಿರುವುದು ತೀರಾ ಅಪಾಯಕಾರಿ ಸಂಗತಿ.
ಕಾನೂನು ಇದ್ದಮೇಲೆ ಅದು ಖಂಡಿತವಾಗಿಯೂ ದುರುಪಯೋಗ ಆಗುತ್ತದೆ. ಈ ಕಾನೂನು ತೆಗೆದುಹಾಕಲು ಸಾಹಿತಿಗಳೆಲ್ಲ ಸಂಘ ಕಟ್ಟಿಕೊಂಡು ಕೋರ್ಟ್ನಲ್ಲಿ ದಾವೆ ಹೂಡಬೇಕು. ಅದಕ್ಕೆ ಬೇಕಾದ ಹಣವನ್ನು ದೇಣಿಗೆ ಮೂಲಕ ಸಂಗ್ರಹಿಸಬೇಕು’ ಎಂದು ಸಲಹೆ ನೀಡಿದರು.
‘ಕನ್ನಡದ ಸಾಹಿತಿಗಳು ಮಾತ್ರವಲ್ಲದೆ ಅಕ್ಕ–ಪಕ್ಕದ ರಾಜ್ಯಗಳ ಇತರ ಭಾಷೆಗಳ ಸಾಹಿತಿಗಳ ಸಹಕಾರವನ್ನೂ ಪಡೆಯಬೇಕು’ ಎಂದು ತಿಳಿಸಿದರು. ‘ನಾನು ಅಗತ್ಯವಾದ ಎಲ್ಲ ಸಹಕಾರ ನೀಡುತ್ತೇನೆ. ಈಗಲೇ ದೇಣಿಗೆ ನೀಡಲು ಸಿದ್ಧನಿದ್ದೇನೆ’ ಎಂದು ಹೇಳಿದರು.
ಅಸಹ್ಯ ಮೂಡಿಸುವ ವಿದ್ಯಮಾನ: ‘ಧಾರವಾಡ ಸಾಹಿತ್ಯ ಸಂಭ್ರಮ ಹಾಗೂ ಸಾಹಿತ್ಯ ಪರಿಷತ್ತು ನಡೆಸುವ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರದ ಅನುದಾನ ಕೇಳಬಾರದು. ಕೊನೆಯ ಗಳಿಗೆವರೆಗೆ ಹಣ ಕೊಡದೆ ಸತಾಯಿಸುವುದು, ಅದಕ್ಕಾಗಿ ಕಸಾಪ ಅಧ್ಯಕ್ಷರು ಉಪವಾಸ ಕೂಡುತ್ತೇನೆ ಎನ್ನುವುದು, ಇಂತಹ ವಿದ್ಯಮಾನಗಳು ಅಸಹ್ಯ ಹುಟ್ಟಿಸುತ್ತವೆ’ ಎಂದು ತಿಳಿಸಿದರು.
‘ಕಾಲದಿಂದ ಕಾಲಕ್ಕೆ ಸಾಹಿತ್ಯದ ಅರ್ಥವ್ಯಾಪ್ತಿ ಬದಲಾಗುತ್ತಲೇ ಇದೆ. ಪುಸ್ತಕದ ಅಂಗಡಿಯಲ್ಲಿ ಸಿಕ್ಕಿದ್ದಷ್ಟೇ ಸಾಹಿತ್ಯ ಎನ್ನುವ ಅಭಿಪ್ರಾಯ ಸಾಮಾನ್ಯವಾಗಿರುವಾಗ ಧಾರವಾಡ ಸಂಭ್ರಮ ಹೊಸ ಹಾದಿಗಳನ್ನು ತೋರಿದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಬಿ.ಎ. ವಿವೇಕ ರೈ ಮೆಚ್ಚುಗೆ ವ್ಯಕ್ತಪಡಿಸಿದರು.
‘ಸಂಭ್ರಮದಿಂದ ಸಾಹಿತ್ಯದ ಮಗ್ಗಲುಗಳು ವಿಸ್ತರಣೆಗೊಂಡಿವೆ. ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಮಕ್ಕಳ ಸಾಹಿತ್ಯದ ಚರ್ಚೆಯೂ ಇಲ್ಲಿ ನಡೆದಿದೆ’ ಎಂದು ಹೇಳಿದರು.
‘ಸಾಹಿತಿಗಳು ಮತ್ತು ಭಾಷಾತಜ್ಞರು ತಂತ್ರಜ್ಞಾನದ ಪರಿಣಾಮವನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ಸಾಂಸ್ಕೃತಿಕ ಬಿಕ್ಕಟ್ಟು ಎದುರಿಸಬೇಕಾಗುತ್ತದೆ. ಬ್ಲಾಗ್ನಲ್ಲಿ ಹರಡುತ್ತಿರುವ ಸಾಹಿತ್ಯ ಮತ್ತು ಅದರ ನೈತಿಕ ಪ್ರಶ್ನೆ ಬಹುಮುಖ್ಯವಾಗಿದೆ’ ಎಂದು ತಿಳಿಸಿದರು.
ಅಸ್ಪೃಶ್ಯತೆ ತೊಡೆದುಹಾಕಿದ ಉತ್ಸವ: ‘ಸಾಹಿತಿಗಳ ಅಸ್ಪೃಶ್ಯತೆಯನ್ನು ಈ ಉತ್ಸವ ತೊಡೆದುಹಾಕಿದೆ’ ಎಂದು ಅಭಿಮಾನದಿಂದ ನುಡಿದರು.
ಮೂರು ದಿನಗಳ ಸಂಭ್ರಮದ ನೋಟಗಳನ್ನು ಮುಂದಿಟ್ಟ ನರಹಳ್ಳಿ ಬಾಲಸುಬ್ರಹ್ಮಣ್ಯ, ‘ಸಂವಾದವೇ ಅಪರೂಪವಾದ ಈ ಸಂದರ್ಭದಲ್ಲಿ ಸಾಹಿತ್ಯ ಸಂಭ್ರಮ ಅದನ್ನು ಸಾಧ್ಯವಾಗಿಸಿದೆ. ಉಜ್ವಲ ಅಧ್ಯಾಯವೊಂದನ್ನು ತೆರೆದಿದೆ’ ಎಂದು ಕೊಂಡಾಡಿದರು.
‘ಸಾಹಿತ್ಯವು ಧರ್ಮ, ರಾಜಕೀಯ ಮತ್ತು ಸಮಾಜದ ಜತೆಗೂ ಸಂವಾದ ನಡೆಸಬೇಕಿದೆ’ ಎಂದು ಅವರು ಅಭಿಪ್ರಾಯಪಟ್ಟರು.
‘ಕೆಲವು ಗೋಷ್ಠಿಗಳಿಗೆ ಸಮಯ ಸಾಕಾಗಲಿಲ್ಲ. ನಡುವೆ ತುಸು ವಿರಾಮ ಬೇಕಿತ್ತು’ ಎಂದ ಅವರು, ‘ಸಮರ್ಥರ ಆಯ್ಕೆಯಿಂದ ಚರ್ಚೆಗಳು ಕಳೆಗಟ್ಟಿದ್ದವು’ ಎಂದು ಹೇಳಿದರು.
‘ಪ್ರಭುತ್ವ ಹಾಗೂ ಸೃಜನಶೀಲತೆಯನ್ನು ಪಂಪ ನಿಭಾಯಿಸಿದ ರೀತಿ ಸಾಹಿತ್ಯವು ಧರ್ಮ ಹಾಗೂ ರಾಜಕೀಯದ ಪ್ರಭಾವಕ್ಕೆ ಸಿಕ್ಕು ನಲುಗುತ್ತಿರುವ ಈ ಸಂದರ್ಭದಲ್ಲಿ ಮಾದರಿಯಾಗಬೇಕಿದೆ, ಮಾರ್ಗದರ್ಶನ ನೀಡಬೇಕಿದೆ’ ಎಂದರು.ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್.ಬಿ. ವಾಲಿಕಾರ, ‘ಸಾಹಿತ್ಯ ಸಂಭ್ರಮದ ಕಾರ್ಯಕ್ರಮಗಳು ವಿ.ವಿ ಸಭಾಂಗಣದಲ್ಲಿ ತಪ್ಪದೇ ನಡೆಯುವಂತಾಗಲು ಟ್ರಸ್ಟ್, ವಿ.ವಿಯೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್ನ ಅಧ್ಯಕ್ಷ ಡಾ. ಗಿರಡ್ಡಿ ಗೋವಿಂದರಾಜ, ‘ಇನ್ನುಮುಂದೆ ಸಂಭ್ರಮವನ್ನು ಎರಡು ವರ್ಷಕ್ಕೊಮ್ಮೆ ನಡೆಸುವ ಯೋಚನೆ ಇದೆ. ವಿ.ವಿಯೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತೇವೆ’ ಎಂದರು.
‘ಸರ್ಕಾರದಿಂದ ಅನುದಾನ ಪಡೆದರೆ ಅದು ಇರುವಷ್ಟು ಕಾಲ ಋಣ ಇರುತ್ತದೆ. ಖಾಸಗಿ ವ್ಯಕ್ತಿಗಳಿಂದ ದೇಣಿಗೆ ಪಡೆದರೆ ಅವರ ಋಣದಲ್ಲಿ ಸದಾಕಾಲ ಇರಬೇಕು. ನಂತರ ಅವರ ಸವಾರಿಯನ್ನೂ ಸಹಿಸಿಕೊಳ್ಳಬೇಕು. ಹೀಗಾಗಿ ಸರ್ಕಾರಿ ಅನುದಾನವೇ ಸಾಕು’ ಎಂದು ಅವರು ಹೇಳಿದರು.
ಸಾಹಿತ್ಯ ಸಂಭ್ರಮದ ಗೋಷ್ಠಿಗಳ ಲಿಂಕ್ : –
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.