ಕಾರವಾರ: ಯಲ್ಲಾಪುರದ ಕಾಂಗ್ರೆಸ್ ಶಾಸಕ ಶಿವರಾಮ ಹೆಬ್ಬಾರ ಅವರ ಪತ್ನಿ ವನಜಾಕ್ಷಿ ಹೆಬ್ಬಾರ ಅವರಿಗೆ ಬಿಜೆಪಿಯಿಂದ ಕರೆ ಮಾಡಿ ಆಮಿಷವೊಡ್ಡಲಾಗಿತ್ತು ಎಂಬ ಆರೋಪವನ್ನು ಸ್ವತಃ ಶಿವರಾಮ ಹೆಬ್ಬಾರ ಅವರೇ ನಿರಾಕರಿಸಿದ್ದಾರೆ. ಈ ಬಗ್ಗೆ ಫೇಸ್ಬುಕ್ನ ತಮ್ಮ ಪುಟದಲ್ಲಿ ಅವರು ಬರೆದುಕೊಂಡಿದ್ದಾರೆ.
‘ನ್ಯೂಸ್ ಚಾನಲ್ಗಳಲ್ಲಿ ನನ್ನ ಪತ್ನಿಯೊಂದಿಗೆ ಬಿಜೆಪಿಯವರು ನಡೆಸಿದ್ದಾರೆ ಎನ್ನುವ ಟೇಪ್ ಬಿಡುಗಡೆ ವಿಷಯ, ಸದನದಲ್ಲಿದ್ದ ನನಗೆ ತಡವಾಗಿ ಮಾಹಿತಿ ಬಂತು. ಇದು ನನ್ನ ಹೆಂಡತಿಯ ಧ್ವನಿಯೂ ಅಲ್ಲ ಮತ್ತು ನನ್ನ ಹೆಂಡತಿಗೆ ಯಾರ ಫೋನ್ ಕರೆ ಬಂದೂ ಇಲ್ಲ. ರಾಜಕೀಯ ಕಾರಣಕ್ಕಾಗಿ ಈ ರೀತಿ ಸುಳ್ಳು ಟೇಪ್ಗಳನ್ನು ಯಾರೇ ಬಿಡುಗಡೆ ಮಾಡಿದರೂ ಅದಕ್ಕೆ ನನ್ನ ಧಿಕ್ಕಾರ’ ಎಂಬ ಪೋಸ್ಟ್ ಪ್ರಕಟಿಸಿದ್ದಾರೆ.
</p><p>‘ಈ ಆಡಿಯೋ ಟೇಪ್ ಫೇಕ್... ಇದನ್ನು ಖಂಡಿಸುತ್ತೇನೆ. ನನ್ನ ಕ್ಷೇತ್ರದ ಜನರು ಮತ್ತೊಮ್ಮೆ ಸೇವೆ ಮಾಡಲು ನನಗೆ ಅವಕಾಶ ಕೊಟ್ಟಿದ್ದಾರೆ. ಅವರಿಗೆ ನನ್ನ ಧನ್ಯವಾದಗಳು. ನನ್ನ ಜನಪರ ಕೆಲಸಗಳು ಮುಂದುವರಿಯಲಿವೆ’ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.</p><p>‘ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ, ಬಿಜೆಪಿ ಮುಖಂಡರೂ ಆಗಿರುವ ಬಿ.ವೈ.ವಿಜಯೇಂದ್ರ ಅವರು ವನಜಾಕ್ಷಿ ಹೆಬ್ಬಾರ ಅವರಿಗೆ ಕರೆ ಮಾಡಿದ್ದರು. ಶಾಸಕ ಶಿವರಾಮ ಹೆಬ್ಬಾರ ಬಿಜೆಪಿಯನ್ನು ಬೆಂಬಲಿಸಿದರೆ ₹ 15 ಕೋಟಿ ಮತ್ತು ಸಚಿವ ಸ್ಥಾನ ನೀಡಲಾಗುವುದು. ನಿಮ್ಮ ಪುತ್ರನ ಮೇಲಿರುವ ಅಕ್ರಮ ಗಣಿಗಾರಿಕೆ ಪ್ರಕರಣವನ್ನು ರದ್ದುಪಡಿಸುತ್ತೇವೆ’ ಆಮಿಷವೊಡ್ಡಲಾಗಿತ್ತು ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಆರೋಪಿಸಿದ್ದರು. ಅಲ್ಲದೇ ಈ ಸಂಬಂಧಿಸಿದ ಧ್ವನಿಮುದ್ರಿಕೆಯನ್ನೂ ಅವರು ಕೇಳಿಸಿದ್ದರು.</p></p>
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.