ಉಡುಪಿ: ಇತ್ತೀಚೆಗೆ ನಡೆದ `ಸ್ಪ್ರಿಂಗ್ ಝೂಕ್~ ಉತ್ಸವದಲ್ಲಿ ವಿದೇಶಿಯರ ಅತಿರೇಕದ ವರ್ತನೆಯಿಂದಾಗಿ ಮಲ್ಪೆಯ ಸೇಂಟ್ ಮೇರಿಸ್ ದ್ವೀಪದ ಪಾವಿತ್ರ್ಯ ಹಾಳಾಗಿದೆ ಎಂದು ಉಡುಪಿ ಮತ್ತು ಕಾಪು ಕ್ಷೇತ್ರದ ಯುವ ಕಾಂಗ್ರೆಸ್ ಕಾರ್ಯಕರ್ತರು ದ್ವೀಪದಲ್ಲಿ ಶುಕ್ರವಾರ ಶುದ್ಧೀಕರಣ ಹೋಮ-ಹವನ ನಡೆಸಿದರು.
ದ್ವೀಪದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಮೊದಲು ಹೇಳಿದ್ದ ಯುವ ಕಾಂಗ್ರೆಸ್ ಪದಾಧಿಕಾರಿಗಳು, ಪುರೋಹಿತರಿಂದ ಮಂತ್ರ ಪ್ರೋಕ್ಷಣ ಮಾಡಿಸಿ ಹೋಮವನ್ನಷ್ಟೇ ನಡೆಸಿದರು.
ಈ ಸಂದರ್ಭದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮಧ್ವರಾಜ್, ಪರಶುರಾಮ ಸನ್ನಿಧಿಯಲ್ಲಿ ಈವರೆಗೆ ದೇವರ ದಯೆಯಿಂದ ಸುನಾಮಿ, ಸುಂಟರಗಾಳಿಯಂತಹ ಯಾವುದೇ ಅವಘಡ ಸಂಭವಿಸಿಲ್ಲ. ಆದರೆ, ಇಲ್ಲಿ ಬಿಜೆಪಿ ಪ್ರಾಯೋಜಿತ `ಸ್ಪ್ರಿಂಗ್ ಝೂಕ್~ ಉತ್ಸವದಿಂದಾಗಿ ಪರಿಸರ ಅಪವಿತ್ರಗೊಂಡಿದೆ. ಹಾಗಾಗಿ ಸ್ಥಳ ಶುದ್ಧಿ ವಿಧಿ ನಡೆಸಲಾಯಿತು.
ಕೇರಳ, ಗೋವಾ ಸಂಸ್ಕೃತಿ ನಮ್ಮಲ್ಲಿ ಮುಂದುವರಿಯುವುದು ಬೇಡ ಎಂದು ಅವರು ಆಗ್ರಹಿಸಿದರು.
ಶರತ್ ಭಟ್ ನೇತೃತ್ವದಲ್ಲಿ ನಡೆದ ಶುದ್ಧೀಕರಣ ಹೋಮದಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಉಮೇಶ್ ಗೌಡ, ಕಾಂಗ್ರೆಸ್ ಮಹಿಳಾ ಘಟಕ ಅಧ್ಯಕ್ಷೆ ವೆರೋನಿಕಾ ಕರ್ನೆಲಿಯೋ, ಸರಸು ಬಂಗೇರಾ, ಸುಲೋಚನಾ ದಾಮೋದರ್, ಯತೀಶ್ ಕರ್ಕೆರಾ, ಅಬ್ದುಲ್ ಅಜೀಜ್, ನವೀನ್ ಚಂದ್ರ ಶೆಟ್ಟಿ, ಕೀರ್ತಿ ಶೆಟ್ಟಿ, ಸುನಿಲ್ ಬಂಗೇರಾ, ರಮೇಶ್ ಕಾಂಚನ್ ಮತ್ತಿತರರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.