ಬಳ್ಳಾರಿ: ಜಿಲ್ಲೆಯ ಇತಿಹಾಸ ಪ್ರಸಿದ್ಧ ಹಂಪಿಯಲ್ಲಿ ಮುಂದಿನ ವರ್ಷದ ಜನವರಿ 15ರಿಂದ 20ರ ಅವಧಿಯಲ್ಲಿ ಮೂರು ದಿನಗಳ ಕಾಲ ಉತ್ಸವ ಆಚರಿಸುವ ಸಾಧ್ಯತೆಗಳಿದ್ದು, ಕೇಂದ್ರ ಪ್ರವಾಸೋದ್ಯಮ ಸಚಿವ ಚಿರಂಜೀವಿ ಅವರಿಗೆ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಆನಂದ್ಸಿಂಗ್ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್ 5ರ ನಂತರ ಕೇಂದ್ರ ಸಚಿವ ಚಿರಂಜೀವಿ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ, ಅಧಿಕೃತವಾಗಿ ಆಹ್ವಾನ ನೀಡಲಾಗುವುದು.
ಆಗಲೇ ಹಂಪಿ ಉತ್ಸವ ಕುರಿತ ಅಂತಿಮ ದಿನಾಂಕ ಪ್ರಕಟಿಸಲಾಗುವುದು. ಮುಂದಿನ ವರ್ಷದಿಂದ ನಿಗದಿಯಂತೆ ನವೆಂಬರ್ ತಿಂಗಳಲ್ಲೇ ಉತ್ಸವ ಆಚರಿಸಲಾಗುವುದು ಎಂದರು. ಡಿಸೆಂಬರ್ 10ರೊಳಗೆ ಹಂಪಿಯ ಸ್ಮಾರಕಗಳೆದುರು `ಹಂಪಿ ಬೈ ನೈಟ್~ ಧ್ವನಿ-ಬೆಳಕು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ನಂದಿ ಬೆಟ್ಟಕ್ಕೆ ರೋಪ್ ವೇ ಅಳವಡಿಸಲು ಹೈದರಾಬಾದ್ ಮೂಲದ ಕಂಪೆನಿಯೊಂದು ಮುಂದೆ ಬಂದಿದ್ದು, ಈ ಕುರಿತೂ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.