ಗೋಣಿಕೊಪ್ಪಲು (ಕೊಡಗು): ಜಾನುವಾರುಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದ್ದ ಹುಲಿ ಸೆರೆಗೆ ಅರಣ್ಯ ಇಲಾಖೆ ಶನಿವಾರ ಕೊಟ್ಟಗೇರಿ ಭಾಗದ ಕಾಫಿ ತೋಟವನ್ನೆಲ್ಲ ಜಾಲಾಡಿದರೂ ಸುಳಿವು ಪತ್ತೆಯಾಗಲಿಲ್ಲ.
ನಾಗರಹೊಳೆ ಅರಣ್ಯದಂಚಿನ ಕೊಟ್ಟಗೇರಿ ಗ್ರಾಮದ ಕಾಫಿ ತೋಟದಲ್ಲಿ ಗುರುವಾರ ರಾತ್ರಿ ಹುಲಿ ಸುಳಿದಾಡುತ್ತಿರುವುದು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಗೋಚರಿಸಿತ್ತು. ವಿರಾಜಪೇಟೆ ಉಪಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತರಾಜ್, ತಿತಿಮತಿ ಎಸಿಎಫ್ ಶ್ರೀಪತಿ, ನಾಗರಹೊಳೆ ಎಸಿಎಫ್ ಪೌಲ್ ಅಂಟೋನಿ, ಮತ್ತಿಗೋಡು ಆರ್ಎಫ್ಒ ಕಿರಣ್ಕುಮಾರ್, ಪೊನ್ನಂಪೇಟೆ ಆರ್ಎಫ್ಒ ಗಂಗಾಧರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಸ್ಟಿಪಿಎಫ್ ತಂಡ, ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ 40 ಮಂದಿ ಪಾಲ್ಗೊಂಡಿದ್ದರು.
ಅರಣ್ಯ ಇಲಾಖೆಯ ಹುಲಿ ಸೆರೆ ಹಿಡಿಯುವ ವಿಷೇಷ ತಜ್ಞ ವೆಂಕಟೇಶ್ ಅವರು ಮತ್ತಿಗೋಡು ಸಾಕಾನೆ ಶಿಬಿರದ ಅಭಿಮನ್ಯು, ಕೃಷ್ಣ, ದ್ರೋಣ, ಭೀಮ ಆನೆಗಳನ್ನು ಬಳಸಿಕೊಂಡು ಕಾಫಿ ತೋಟವನ್ನೆಲ್ಲ ಬೆಳಿಗ್ಗೆ 11ರ ವರೆಗೂ ತಡಕಾಡಿದರು. ಬೇಸಿಗೆಯಾದ್ದರಿಂದ ಹೆಜ್ಜೆ ಗುರುತು ಕೂಡ ಲಭಿಸುತ್ತಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.