ಬೆಂಗಳೂರು: ಇಲಾಖೆ, ನಿಗಮ, ಮಂಡಳಿ ಹಾಗೂ ಸಂಸ್ಥೆಗಳಲ್ಲಿ ಯಾವುದೇ ಹೊಸ ಯೋಜನೆಗೆ ಮುಂದಿನ ಆದೇಶದವರೆಗೆ ಅನುಮೋದನೆ ನೀಡಬಾರದು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಸೂಚನೆ ನೀಡಿದ್ದಾರೆ.
ಸಮ್ಮಿಶ್ರ ಸರ್ಕಾರದ ಆದ್ಯತೆ, ಗುರಿ ಹಾಗೂ ಉದ್ದೇಶಗಳಿಗೆ ಅನುಗುಣವಾಗಿ 2018–19ನೇ ಸಾಲಿನ ಬಜೆಟನ್ನು ಹೊಸದಾಗಿ ಮಂಡಿಸಬೇಕಿದೆ. ಹೀಗಾಗಿ, ಎಲ್ಲಾ ಮುಂದುವರಿದ ಯೋಜನೆಗಳಿಗೆ ಲೇಖಾನುದಾನ ಪಡೆದಿರುವ ಮಿತಿಗಿಂತ ಹೆಚ್ಚು ಅನುದಾನ ನೀಡಬಾರದು. ಚಾಲ್ತಿ ಇರುವ ಕಾರ್ಯಕ್ರಮಗಳಿಗೆ ಹಣ ಬಿಡುಗಡೆಗೆ ಮುನ್ನ ಮುಖ್ಯಮಂತ್ರಿ ಅವರ ಪೂರ್ವಾನುಮೋದನೆ ಪಡೆಯಬೇಕು ಎಂದು ಅವರು ತಿಳಿಸಿದ್ದಾರೆ.
ವರ್ಗಾವಣೆಗೆ ನಿರ್ಬಂಧ: ಮುಂದಿನ ಆದೇಶ ಹೊರಡಿಸುವವರೆಗೂ ಯಾವುದೇ ಇಲಾಖೆಯಲ್ಲಿ, ಯಾವುದೇ ವೃಂದದಲ್ಲಿ ವರ್ಗಾವಣೆ ಆದೇಶ ಹೊರಡಿಸಬಾರದು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಸುತ್ತೋಲೆ ಹೊರಡಿಸಿದ್ದಾರೆ.
ಅನಿವಾರ್ಯ ಸಂದರ್ಭಗಳಲ್ಲಿ ಅಂತಹ ಪ್ರಸ್ತಾವಗಳನ್ನು ಮುಖ್ಯ ಕಾರ್ಯದರ್ಶಿಯವರ ಮೂಲಕ ಮುಖ್ಯಮಂತ್ರಿಯವರ ಅವಗಾಹನೆಗೆ ಸಲ್ಲಿಸಬೇಕು ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.