ADVERTISEMENT

ಸ್ಯಾಂಟ್ರೊ ರವಿ, ಸಹಚರರಿಗೆ 14 ದಿನ ನ್ಯಾಯಾಂಗ ಬಂಧನ

​ಪ್ರಜಾವಾಣಿ ವಾರ್ತೆ
Published 14 ಜನವರಿ 2023, 19:31 IST
Last Updated 14 ಜನವರಿ 2023, 19:31 IST
ಮೈಸೂರಿನಲ್ಲಿ ಸ್ಯಾಂಟ್ರೊ ರವಿಯನ್ನು ನ್ಯಾಯಾಧೀಶರ ನಿವಾಸಕ್ಕೆ ಕರೆದೊಯ್ದ ಪೊಲೀಸರು.
ಮೈಸೂರಿನಲ್ಲಿ ಸ್ಯಾಂಟ್ರೊ ರವಿಯನ್ನು ನ್ಯಾಯಾಧೀಶರ ನಿವಾಸಕ್ಕೆ ಕರೆದೊಯ್ದ ಪೊಲೀಸರು.   

ಮೈಸೂರು: ಪರಿಶಿಷ್ಟ ಮಹಿಳೆ ಮೇಲಿನ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಗೂಂಡಾಗಿರಿ ಆರೋಪದ ಮೇರೆಗೆ ಪೊಲೀಸರು ಗುಜರಾತ್‌ನಲ್ಲಿ ಬಂಧಿಸಿದ್ದ ಕೆ.ಎಸ್‌. ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೊ ರವಿ ಮತ್ತು ಸಹವರ್ತಿಗಳಾದ ಪ್ರೇಮ್‌ಜಿ ಹಾಗೂ ಶ್ರುತೇಶ್‌ (ಸತೀಶ್‌) ಅವರಿಗೆ ಇಲ್ಲಿನ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದರು.

ಶನಿವಾರ ನಸುಕಿನ ಜಾವ ಅಹಮದಾಬಾದ್‌ನಿಂದ ಆರೋಪಿಗಳನ್ನು ನಗರಕ್ಕೆ ಕರೆತಂದ ಬಳಿಕ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ವಿಜಯನಗರ ಠಾಣೆಗೆ ಕರೆದೊಯ್ಯಲಾಯಿತು. ಅಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್‌ ಕುಮಾರ್‌ ನೇತೃತ್ವದಲ್ಲಿ ವಿಚಾರಣೆ ನಡೆಸಲಾಯಿತು.

ಠಾಣೆ ಬಳಿ ಬಿಗಿ ಪೊಲೀಸ್‌ ಭದ್ರತೆ ಏರ್ಪಡಿಸಿ, ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ‘ನಗರದ 6ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಬೇಕಿತ್ತು. ಎರಡನೇ ಶನಿವಾರ ನ್ಯಾಯಾಲಯ ಕಲಾಪವಿಲ್ಲದೆ ಸಂಜೆ 6 ಗಂಟೆಗೆ ನಗರದ ವಾಲ್ಮೀಕಿ ರಸ್ತೆಯಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ಕರೆದೊಯ್ಯಲಾಯಿತು. ಬಳಿಕ ಕಾರಾಗೃಹಕ್ಕೆ ರವಾನಿಸಲಾಯಿತು’ ಎಂದು ತನಿಖಾಧಿಕಾರಿ ಬಿ.ಎಸ್‌. ರವಿಶಂಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

*
ಸ್ಯಾಂಟ್ರೊ ರವಿ ನಿರಂತರ ಇನ್ಸುಲಿನ್‌ ತೆಗೆದುಕೊಳ್ಳುವುದು ವೈದ್ಯಕೀಯ ತಪಾಸಣೆ ವೇಳೆ ಗೊತ್ತಾಗಿದ್ದು, ಅದನ್ನು ಒದಗಿಸಲಾಗುವುದು. -ಅಲೋಕ್ ಕುಮಾರ್‌, ಎಡಿಜಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.