ADVERTISEMENT

274 ಭೂ ಮಾಪಕರಿಗೆ ಬಡ್ತಿ, ಕೌನ್ಸೆಲಿಂಗ್‌ ಮೂಲಕ ವರ್ಗ

​ಪ್ರಜಾವಾಣಿ ವಾರ್ತೆ
Published 27 ಜೂನ್ 2015, 19:30 IST
Last Updated 27 ಜೂನ್ 2015, 19:30 IST
ಬೆಂಗಳೂರಿನಲ್ಲಿ ಶನಿವಾರ ನಡೆದ ವರ್ಗಾವಣೆ ಕೌನ್ಸೆಲಿಂಗ್‌ನಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಬಂದಿದ್ದ ಭೂಮಾಪಕರು ಪಾಲ್ಗೊಂಡಿದ್ದರು
ಬೆಂಗಳೂರಿನಲ್ಲಿ ಶನಿವಾರ ನಡೆದ ವರ್ಗಾವಣೆ ಕೌನ್ಸೆಲಿಂಗ್‌ನಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಬಂದಿದ್ದ ಭೂಮಾಪಕರು ಪಾಲ್ಗೊಂಡಿದ್ದರು   

ಬೆಂಗಳೂರು: ಭೂಮಾಪನಾ ಇಲಾಖೆಯು ಹಿರಿತನದ ಆಧಾರದಲ್ಲಿ 274 ಭೂಮಾಪಕರಿಗೆ ಮೇಲ್ವಿಚಾರಕರ ಹುದ್ದೆಗೆ ಬಡ್ತಿ ನೀಡಿ, ಅವರು ಆಯ್ಕೆ ಮಾಡಿದ ಸ್ಥಳಕ್ಕೆ ವರ್ಗಾವಣೆ ಮಾಡಿದೆ.

ಬೆಂಗಳೂರಿನಲ್ಲಿ ಶನಿವಾರ ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ಮಾಡಲಾಯಿತು. ಇಲಾಖೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವರ್ಗಾವಣೆ ಕೌನ್ಸೆಲಿಂಗ್‌ ನಡೆಸಿದೆ. ವಿಧವೆಯವರು, ಅಂಗವಿಕಲರು, ದೀರ್ಘಾವಧಿ ಅನಾರೋಗ್ಯ ಹೊಂದಿರುವವರು, ಪತಿ –ಪತ್ನಿ ಪ್ರಕರಣಗಳಲ್ಲಿ ಅವರ ಅನುಕೂಲಕ್ಕೆ  ಅನುಗುಣವಾಗಿ ನಿಯೋಜನಾ ಸ್ಥಳ ಆಯ್ಕೆ ಮಾಡುವುದಕ್ಕೂ ಅವಕಾಶ ಕಲ್ಪಿಸಲಾಗಿತ್ತು. ಬಡ್ತಿ ಸಿಕ್ಕಿರುವ 274 ಭೂಮಾಪಕರ ಪೈಕಿ 40 ಮಂದಿ ಹೈದರಾಬಾದ್‌ –ಕರ್ನಾಟಕ ಭಾಗದವರಾಗಿದ್ದಾರೆ.

ಕೃತಜ್ಞತೆ: ಪಾರದರ್ಶಕವಾಗಿ ಒಂದೇ ದಿನದಲ್ಲಿ ಮುಂಬಡ್ತಿ, ವರ್ಗಾವಣೆ ಪ್ರಕ್ರಿಯೆ ನಡೆಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ  ಕರ್ನಾಟಕ ರಾಜ್ಯ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಕಾರ್ಯ ನಿರ್ವಾಹಕರ ನೌಕರರ ಸಂಘ, ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್, ಇಲಾಖೆ ಆಯುಕ್ತ ಮನೀಶ್‌ ಮೌದ್ಗಿಲ್‌ ಅವರಿಗೆ ಕೃತಜ್ಞತೆ ಸಲ್ಲಿಸಿದೆ.

ತಡೆಯುವ ಪ್ರಯತ್ನ?
ಭೂಮಾಪಕರಿಗೆ ಮುಂಬಡ್ತಿ  ನೀಡಿ ವರ್ಗಾವಣೆ ಮಾಡುವ ಪ್ರಕ್ರಿಯೆಯನ್ನು ಕೊನೆಗಳಿಗೆಯಲ್ಲಿ ತಡೆಯಲು ಯತ್ನಿಸಿದ ಘಟನೆ ನಡೆದಿದೆ. ಶನಿವಾರ ಸಂಜೆ ಕೌನ್ಸೆಲಿಂಗ್‌ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಆದೇಶದ ಪ್ರತಿಗೆ ಆಯುಕ್ತರ ಸಹಿ ಬೀಳುವುದಕ್ಕೂ ಮುನ್ನ ಕೆಲವರು ಸಚಿವರಿಗೆ ಹೇಳಿ ಅದನ್ನು ತಡೆಯುವ ಯತ್ನ ನಡೆಸಿದರು.

ಇದನ್ನು ಅರಿತ ನೌಕರರ ಸಂಘದ ಸದಸ್ಯರು, ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್‌ ಅವರ ಮನೆಗೆ ತೆರಳಲು ಸಿದ್ಧತೆ ನಡೆಸುತ್ತಿರುವಾಗ, ಆದೇಶಕ್ಕೆ ಸಹಿ ಬಿತ್ತು ಎಂದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT