ADVERTISEMENT

5 ಲಕ್ಷ ಜನರಿಗೆ ಉದ್ಯೋಗ: ನಿರಾಣಿ ವಿಶ್ವಾಸ

ರಾಜ್ಯದಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2022, 19:10 IST
Last Updated 12 ಅಕ್ಟೋಬರ್ 2022, 19:10 IST
ಮುರುಗೇಶ ನಿರಾಣಿ
ಮುರುಗೇಶ ನಿರಾಣಿ   

ನವದೆಹಲಿ: ‘ಬೆಂಗಳೂರಿನಲ್ಲಿ ನವೆಂಬರ್‌ 2ರಿಂದ 4ರವರೆಗೆ ನಡೆಯಲಿ ರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ₹5 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗುವ ನಿರೀಕ್ಷೆ ಇದ್ದು, ಇದರಿಂದ 5 ಲಕ್ಷ ಜನರಿಗೆ ಉದ್ಯೋಗ ದೊರೆಯುವ ನಿರೀಕ್ಷೆ ಇದೆ’ ಎಂದು ಕರ್ನಾಟಕದ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ಆರ್‌.ನಿರಾಣಿ ತಿಳಿಸಿದರು.

ಬುಧವಾರ ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಏರೋಸ್ಪೇಸ್‌ ಹಾಗೂ ಸೆಮಿಕಂಡಕ್ಟರ್‌ ಕ್ಷೇತ್ರಗಳಿಂದ ಹೆಚ್ಚಿನ ಬಂಡವಾಳ ಹೂಡಿಕೆಯಾಗುವ ವಿಶ್ವಾಸ ಇದೆ. ಈ ನಿಟ್ಟಿನಲ್ಲಿ ಉದ್ಯಮಿಗಳನ್ನು ಸೆಳೆಯಲು ಕಾರ್ಯಪ್ರವೃತ್ತರಾಗಿದ್ದೇವೆ’ ಎಂದರು.

ರಾಜ್ಯದಲ್ಲಿ→ಹೂಡಿಕೆ ಮಾಡುವ→ಕೈಗಾರಿಕೆಗಳಿಗೆ→ನೀಡಲು 50 ಸಾವಿರ ಎಕರೆ ಜಾಗವನ್ನು→ಗುರುತಿಸಲಾಗಿದೆ.→ಬೆಂಗಳೂರಿನಲ್ಲಿ 20 ಸಾವಿರ ಎಕರೆ ಹಾಗೂ ರಾಜ್ಯದ ಇತರ ಭಾಗಗಳಲ್ಲಿ 30 ಸಾವಿರ ಎಕರೆ ಜಾಗ ಗುರುತಿಸಲಾಗಿದೆ ಎಂದರು.

ADVERTISEMENT

‘ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಪೂರ್ವಭಾವಿಯಾಗಿ ನವದೆಹಲಿಯಲ್ಲಿ ಮಂಗಳವಾರ ರೋಡ್‌ ಶೋ ನಡೆಸಲಾಗಿದೆ. ರಾಜ್ಯದಲ್ಲಿ ಹೂಡಿಕೆಗೆ ಇರುವ ಅವಕಾಶಗಳು ಹಾಗೂ ನಮ್ಮ ಕೈಗಾರಿಕಾ ನೀತಿ ಕುರಿತು ದೇಶದ ಪ್ರಮುಖ ಕಂಪನಿಗಳ ಮುಖ್ಯಸ್ಥರಿಗೆ ಮಾಹಿತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹೈದರಾಬಾದ್ ಹಾಗೂ ಮುಂಬೈನಲ್ಲಿ ರೋಡ್‌ ಶೋ ಹಮ್ಮಿಕೊಳ್ಳಲಾಗುವುದು’ ಎಂದರು.

‘ರೋಡ್‌ಶೋನಲ್ಲಿ ಐಟಿಸಿ, ಸ್ಕೇಪ್‌ ಇಂಡಿಯಾ, ರಿನ್ಯೂ ಪವರ್‌, ಸೆಂಬ್‌ಕಾರ್ಪ್‌ ಎನರ್ಜಿ, ಲಿಥಿಯಾನ್‌ ಪವರ್‌, ದಾಲ್ಮಿಯಾ ಸಿಮೆಂಟ್‌, ಸ್ಟೆರ್ಲಿಂಗ್‌ ಟೂಲ್ಸ್‌, ನೆಸ್ಲೆ, ಜ್ಯೂಬಿಲಿಯಂಟ್‌ ಫುಡ್‌ ವರ್ಕ್ಸ್‌, ಗರುಡ ಏರೋಸ್ಪೇಸ್‌, ವಿ-ಗಾರ್ಡ್‌ ಇಂಡಸ್ಟ್ರೀಸ್‌ ಸೇರಿದಂತೆ ಹಲವು ಕಂಪನಿಗಳ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಲಾಗಿದೆ’ ಎಂದರು.

‘ನೂತನ ಕೈಗಾರಿಕಾ ನೀತಿ ಹಾಗೂ ಕೈಗಾರಿಕಾ ಸೌಲಭ್ಯ ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ನಮ್ಮ ರಾಜ್ಯ ಉದ್ಯಮ ಸ್ನೇಹೀ ರಾಜ್ಯಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ. 2021ರ ಏಪ್ರಿಲ್ 21ರಿಂದ 2022ರ ಮಾರ್ಚ್‌ ಅವಧಿಯಲ್ಲಿ ₹1.76 ಲಕ್ಷ ಕೋಟಿ ವಿದೇಶಿ ನೇರ ಹೂಡಿಕೆ ಆಕರ್ಷಿಸುವಲ್ಲಿ ರಾಜ್ಯವು ಯಶಸ್ವಿಯಾಗಿದೆ’ ಎಂದು ಅವರು ಹೇಳಿದರು.

‘ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 5000ಕ್ಕೂ ಹೆಚ್ಚು ಗಣ್ಯರು ಭಾಗವಹಿಸುವ ನಿರೀಕ್ಷೆ ಇದೆ. ವರ್ಚುವಲ್‌ ಮಾದರಿಯಲ್ಲಿ ಸಮಾವೇಶವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌, ಪೀಯೂಷ್‌ ಗೋಯೆಲ್‌, ಸ್ಮೃತಿ ಇರಾನಿ, ಪ್ರಲ್ಹಾದ ಜೋಷಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.