ADVERTISEMENT

ಮಳೆ ಸಂತ್ರಸ್ತರಿಗೆ ಪರಿಹಾರ ಘೋಷಣೆ: ಮನೆಗಳ ಪುನರ್ ನಿರ್ಮಾಣಕ್ಕೆ ₹5 ಲಕ್ಷ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 10:29 IST
Last Updated 21 ಅಕ್ಟೋಬರ್ 2020, 10:29 IST
   

ಬೆಂಗಳೂರು: ಅಕ್ಟೋಬರ್‌‌ನಲ್ಲಿ ಸುರಿದ ಮಳೆಯಿಂದ ಸಂತ್ರಸ್ತರಾದ ಕುಟುಂಬಗಳಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಿಸಿದ್ದು, ಸಂಪೂರ್ಣ ಮತ್ತು ಭಾಗಶಃ ಮನೆಗಳಿಗೆ ಹಾನಿ ಆಗಿದ್ದರೆ ತಲಾ ₹ 5 ಲಕ್ಷ ಪರಿಹಾರ ನೀಡಲು ತೀರ್ಮಾನಿಸಲಾಗಿದೆ.

ಈ ಸಂಬಂಧ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಅಕ್ಟೋಬರ್‌ವರೆಗೆ ಮಳೆ ಮತ್ತು ಪ್ರವಾಹದಿಂದ ಬಾಧಿತರಾದ ಕುಟುಂಬಗಳಿಗೆ ಅನ್ವಯವಾಗಲಿದೆ. ಉತ್ತರ ಕರ್ನಾಟಕ ಭಾಗದ ಮಣ್ಣಿನ ಮನೆಗಳ ಪುನರ್‌ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಮಸ್ಯಾತ್ಮಕ ಗ್ರಾಮಗಳ ಬಟ್ಟೆ– ಬರೆ ಮತ್ತು ದಿನಗಳಕೆ ವಸ್ತುಗಳಿಗೆ ಕೇಂದ್ರ ಸರ್ಕಾರ ಎಸ್‌ಡಿಆರ್‌ಎಫ್‌/ ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಲ್ಲಿ ಪ್ರತಿ ಕುಟುಂಬಕ್ಕೆ ತಲಾ ₹3,800 ನಿಗದಿ ಮಾಡಿದೆ. ರಾಜ್ಯ ಸರ್ಕಾರದ ವತಿಯಿಂದ ₹6,200 ಸೇರಿಸಿ ಒಟ್ಟು ₹10,000 ಪರಿಹಾರ ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

ಅತಿವೃಷ್ಟಿ ಮತ್ತು ಪ್ರವಾಹದಿಂದಾಗಿ ಹಾನಿಗೀಡಾದ ಮನೆಗಳಿಗೆ ಈ ಕೆಳಕಂಡಂತೆ ಪರಿಹಾರ ಪ್ರಕಟಿಸಲಾಗಿದೆ.

* ಶೇ75 ಕ್ಕಿಂತ ಹೆಚ್ಚು ಸಂಪೂರ್ಣ ಮನೆ ಹಾನಿ ಆಗಿದ್ದರೆ( ’ಎ’ ವರ್ಗಕ್ಕೆ) ₹ 5 ಲಕ್ಷ

* ಶೇ 25 ರಿಂದ ಶೇ 75 ರಷ್ಟು ಭಾಗಶಃ ಹಾನಿ ಆಗಿದ್ದರೆ(ಬಿ ವರ್ಗ) (ಕೆಡವಿ ಹೊಸದಾಗಿ ನಿರ್ಮಿಸಲು) ₹5 ಲಕ್ಷ

* ಶೇ 25 ರಿಂದ ಶೇ 75 ರಷ್ಟು ಮನೆ ಹಾನಿ ಆಗಿದ್ದು, ದುರಸ್ಥಿಗೆ ₹ 3 ಲಕ್ಷ ಹಾಗೂ ಶೇ 15 ರಿಂದ ಶೇ 25 ರಷ್ಟು ಅಂದರೆ, ಅಲ್ಪಸ್ವಲ್ಪ ಹಾನಿ ಆಗಿದ್ದರೆ ಅದರ ದುರಸ್ಥಿಗೆ ₹50 ಸಾವಿರ ನೀಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.