ಕಲಬುರ್ಗಿ: ‘ಮಹದಾಯಿ ವಿಷಯದಲ್ಲಿ ಎಲ್ಲ ಸರ್ಕಾರಗಳು ರಾಜಕೀಯ ಮಾಡುತ್ತಿವೆ. ಅವುಗಳಿಗೆ ಜನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಹೇಳಿದರು.
‘ಮಹದಾಯಿಯಂತೆ ದೇಶದಲ್ಲಿ ಹಲವು ನದಿಗಳ ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸುವ ಮನಸ್ಸುಗಳು ಕಾಣುತ್ತಿಲ್ಲ. ಜನರ ಬಳಿ ಮತದಾನ ಎಂಬ ಕೀಲಿಕೈ ಇದೆ. ಅದನ್ನು ಹಣ, ಮದ್ಯಕ್ಕೆ ಮಾರಿಕೊಳ್ಳಬಾರದು. ಭ್ರಷ್ಟರಿಗೆ, ಕೊಲೆಗಡುಕರಿಗೆ ಮತವನ್ನು ನೀಡಬಾರದು’ ಎಂದು ನಗರದಲ್ಲಿ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.
‘ರೈತರಿಗೆ ತಿಂಗಳಿಗೆ ₹5ಸಾವಿರ ಪಿಂಚಣಿ ನೀಡುವುದು, ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚ ಆಧರಿಸಿ ಬೆಲೆ ನಿಗದಿ ಹಾಗೂ ಡಾ.ಎಂ.ಎಸ್.ಸ್ವಾಮಿನಾಥನ್ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಮಾರ್ಚ್ 23ರಿಂದ ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಆಂದೋಲನ ನಡೆಯಲಿದೆ’ ಎಂದು ಹೇಳಿದರು.
‘ದೇಶದಲ್ಲಿ ರೈತರ ಸ್ಥಿತಿ ಗಂಭೀರವಾಗಿದೆ. ಆತ್ಮಹತ್ಯೆ ಸಂಖ್ಯೆ ಹೆಚ್ಚಾಗುತ್ತಿದೆ. ಕೇಂದ್ರ ಸರ್ಕಾರ ಉದ್ಯಮಿಗಳ ಓಲೈಕೆಯಲ್ಲಿ ತೊಡಗಿಸಿಕೊಂಡಿದೆ. ಚುನಾವಣೆಗೂ ಮುನ್ನ ನೀಡಿದ್ದ ಭರವಸೆಗಳನ್ನು ಪ್ರಧಾನಿ ನರೇಂದ್ರ ಮೋದಿ ಮರೆತಿದ್ದಾರೆ. ರೈತರ ಸಮಸ್ಯೆಗಳನ್ನು ಕುರಿತು 32 ಪತ್ರ ಬರೆದರೂ ಪ್ರಧಾನಿ ಒಂದಕ್ಕೂ ಉತ್ತರ ಕಳುಹಿಸಿಲ್ಲ’ ಎಂದು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.