ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಪ್ರವಾಸ ಕೈಗೊಳ್ಳಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೋಮವಾರ ರಾತ್ರಿ 7.30ಕ್ಕೆ ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.
ಸಂಸದ ನಳಿನ್ಕುಮಾರ್ ಕಟೀಲ್, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ ಮಠಂದೂರು, ಮಂಗಳೂರು ದಕ್ಷಿಣ ಘಟಕದ ಅಧ್ಯಕ್ಷ ಡಿ.ವೇದವ್ಯಾಸ ಕಾಮತ್, ಉತ್ತರ ಘಟಕದ ಅಧ್ಯಕ್ಷ ಡಾ.ಭರತ್ ಶೆಟ್ಟಿ, ಮೂಡುಬಿದಿರೆ ಕ್ಷೇತ್ರ ಘಟಕದ ಅಧ್ಯಕ್ಷ ಈಶ್ವರ ಕಟೀಲ್, ಮುಖಂಡರಾದ ಜೆ.ಕೃಷ್ಣ ಪಾಲೇಮಾರ್, ಬಿ.ನಾಗರಾಜ ಶೆಟ್ಟಿ ಸೇರಿದಂತೆ ಹಲವರು ಬರಮಾಡಿಕೊಂಡರು.
ಶಾ ಅವರ ಸ್ವಾಗತಕ್ಕೆ ನೂರಾರು ಸಂಖ್ಯೆಯ ಕಾರ್ಯಕರ್ತರು ಕಾದಿದ್ದರು. ಚೆಂಡೆ, ಡೋಲು, ಕಹಳೆಗಳ ವಾದನದೊಂದಿಗೆ ಅವರನ್ನು ಸ್ವಾಗತಿಸಲಾಯಿತು. ಅಲ್ಲಿ ನಿರ್ಮಿಸಿದ್ದ ವೇದಿಕೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಬರುತ್ತಿದ್ದಂತೆ ಕಾರ್ಯಕರ್ತರು ಹರ್ಷೋದ್ಘಾರದಿಂದ ಸಂಭ್ರಮಿಸಿದರು.
‘ಅನಾರೋಗ್ಯದ ಕಾರಣದಿಂದ ಅಮಿತ್ ಶಾ ಅವರು ಮಾತನಾಡುವುದಿಲ್ಲ’ ಎಂದು ಪಕ್ಷದ ಮುಖಂಡರು ಪ್ರಕಟಿಸಿದರು. ಬಳಿಕ ಕಾರ್ಯಕರ್ತರತ್ತ ಕೈಬೀಸಿದ ಶಾ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ತೆರಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.