ಚಿಕ್ಕಮಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಅಧ್ಯಕ್ಷ ಮತ್ತು ಸದಸ್ಯರ ಅವಧಿಯನ್ನು ಮೂರರಿಂದ ಐದು ವರ್ಷಕ್ಕೆ ಏರಿಸಲು ಬೈಲಾ ತಿದ್ದುಪಡಿಗೆ ಮುಂದಾಗಿರುವುದು ಸರಿಯಲ್ಲ ಎಂದು ಪರಿಷತ್ತಿನ ಜಿಲ್ಲಾ ಘಟಕದ ಸದಸ್ಯ ಸೂರಿಪ್ರಭು ಅವರು ಇಲ್ಲಿ ಸೋಮವಾರ ಹೇಳಿದರು.
ಬೈಲಾದ ಕ್ರಮ ಸಂಖ್ಯೆ 13ರ ನಿಯಮದಂತೆ ಕಾರ್ಯಕಾರಿ ಸಮಿತಿ ಅವಧಿಯು ಮೂರು ವರ್ಷಗಳಿಗೆ ನಿಗದಿಯಾಗಿದೆ. ಇದನ್ನು ಐದು ವರ್ಷಗಳಿಗೆ ಏರಿಸಲು ಬೈಲಾ ತಿದ್ದುಪಡಿಗೆ ಪರಿಷತ್ತಿನ ಕಾರ್ಯಕಾರಿ ಸಭೆಯಲ್ಲಿ ನಿರ್ಣಯ ಕೈಗೊಂಡು, ಸರ್ವ ಸದಸ್ಯರ ಸಭೆಯಲ್ಲಿ ಮಂಡಿಸುವುದಕ್ಕಾಗಿ ಮಾರ್ಚ್ 5ರಂದು ಕುಂದಾಪುರದಲ್ಲಿ ವಿಶೇಷ ಸಭೆ ಆಯೋಜಿಸಲಾಗಿದೆ. ನಿರ್ಣಯ ಖಂಡಿಸಿ ಸಭೆಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕಾರಿ ಸಮಿತಿಯನ್ನು ಮೂರುವರ್ಷಗಳ ಅವಧಿಗೆ ಆಯ್ಕೆ ಮಾಡಲಾಗಿದೆ. ಅವಧಿ ಏರಿಸುವುದಾದರೆ ಚುನಾವಣೆ ನಂತರ ನಿರ್ಧಾರ ಕೈಗೊಳ್ಳಲಿ. ಈಗ ಅವಧಿ ಏರಿಸಿದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸದಸ್ಯ ರವೀಶ್ ಕ್ಯಾತನಬೀಡು ಮಾತನಾಡಿ, ‘ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷರಿಗೆ ವಾಹನ,, ಕಚೇರಿ ಸೌಲಭ್ಯ ಇರುತ್ತದೆ. ರಾಜ್ಯ ಸರ್ಕಾರ ಸಾಹಿತ್ಯ ಸಮ್ಮೇಳನಕ್ಕೆ ₹10 ಕೋಟಿಯಿಂದ ₹15 ಕೋಟಿವರೆಗೆ ಅನುದಾನ ಬಿಡುಗಡೆ ಮಾಡುತ್ತದೆ. ಕಾರ್ಯಕಾರಿ ಸಮಿತಿಯ ಅವಧಿ ವಿಸ್ತರಿಸುವ ಹುನ್ನಾರ ದುರುದ್ದೇಶಪೂರಿತವಾಗಿದೆ’ ಎಂದು ದೂರಿದರು.
ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ಬೆನಡಿಕ್ಟ್ ಜೇಮ್ಸ್, ಸದಸ್ಯ ವಿ.ಜಯರಾಮ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.