ADVERTISEMENT

7 ಜೀವ ರಕ್ಷಿಸಿದ ಬೆಂಗಾವಲು ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 19:59 IST
Last Updated 17 ಸೆಪ್ಟೆಂಬರ್ 2013, 19:59 IST
ಪ್ರಾಣಾಪಾಯದಿಂದ ಪಾರಾದ ಕಾರಿನಲ್ಲಿದ್ದ 7 ಮಂದಿ
ಪ್ರಾಣಾಪಾಯದಿಂದ ಪಾರಾದ ಕಾರಿನಲ್ಲಿದ್ದ 7 ಮಂದಿ   

ತೀರ್ಥಹಳ್ಳಿ: ಆಕಸ್ಮಿಕವಾಗಿ ಕೆರೆಯಲ್ಲಿ ಮುಳುಗಿದ್ದ ಕಾರಿನಿಂದ ಏಳು ಮಂದಿಯನ್ನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರ ಬೆಂಗಾವಲು ಪಡೆ ರಕ್ಷಣೆ ಮಾಡಿರುವ ಘಟನೆ ತಾಲ್ಲೂಕಿನ ಬೇಗುವಳ್ಳಿಯಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.

ಬೆಳಗ್ಗಿನ 7 ಗಂಟೆ ಸುಮಾರಿಗೆ ಶಿವಮೊಗ್ಗ ಕಡೆಗೆ ಹೋಗುತ್ತಿದ್ದ ಸಚಿವರ ವಾಹನ ಚಾಲಕ, ತೂದೂರು ಸಮೀಪ ಬೇಗುವಳ್ಳಿ ಕೆರೆಯಲ್ಲಿ ಕಾರೊಂದು ಮುಳುಗಿರುವುದನ್ನು ನೋಡಿದ್ದಾರೆ.

ಕಾರಿನೊಳಗೆ ಇದ್ದ ವರು ಜೀವ ರಕ್ಷಣೆಗಾಗಿ ಕೈಗಳನ್ನು ಮೇಲಕ್ಕೆ ಎತ್ತಿ ಸನ್ನೆ ಮಾಡುತ್ತಿರುವುದನ್ನು ಗಮನಿಸಿದ ಸಚಿವರ ಕಾರಿನ
ಚಾಲಕ ಚಂದ್ರು ಹಾಗೂ ಬೆಂಗಾವಲು ಪಡೆ ಸಿಬ್ಬಂದಿ ಕೃಷ್ಣಮೂರ್ತಿ ಅವರು ತಕ್ಷಣ ಜಾಗೃತರಾಗಿ ಜೀವದ ಹಂಗು ತೊರೆದು ಕಾರಿನೊಳಗೆ
ಸಿಲುಕಿ ಹಾಕಿ ಕೊಂಡವರ ಪ್ರಾಣ ಕಾಪಾಡಿದ್ದಾರೆ.

ಕೆರೆಯಲ್ಲಿ ಮುಳುಗಿರುವ ಸ್ವಿಫ್ಟ್ ಕಾರಿನಲ್ಲಿ ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಹಾಗೂ ಮೂವರು ಮಕ್ಕಳು ಇದ್ದರು.
ಉಡುಪಿ ಜಿಲ್ಲೆಯ ಕಾರ್ಕಳದಿಂದ ಶಿವಮೊಗ್ಗ ಕಡೆಗೆ ಹೋಗುತ್ತಿರುವಾಗ ಕಾರು ಮುಂಜಾನೆ ಆಕಸ್ಮಿಕವಾಗಿ ಬೇಗುವಳ್ಳಿ ಕೆರೆಗೆ ಬಿದ್ದಿದೆ. ಕಾರಿನಲ್ಲಿ  ಇದ್ದವರು ಭದ್ರಾವತಿ ನಿವಾಸಿಗಳು ಎಂದು ಗುರುತಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಸಚಿವ ರತ್ನಾಕರ ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.