ADVERTISEMENT

ಅರ್ಕಾವತಿ ರೀಡೂ: ಪರಿಶೀಲನೆಗೆ ಸಮಿತಿ, ನಿವೃತ್ತ ನ್ಯಾ. ಕೇಶವನಾರಾಯಣ ನೇತೃತ್ವ

ನಿವೃತ್ತ ನ್ಯಾ. ಕೇಶವನಾರಾಯಣ ನೇತೃತ್ವ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 17:31 IST
Last Updated 27 ಸೆಪ್ಟೆಂಬರ್ 2021, 17:31 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿದ್ದ ಜಮೀನುಗಳ ಡಿನೋಟಿಫಿಕೇಷನ್ ಪ್ರಕರಣದಲ್ಲಿ ನಡೆದಿರುವ ‘ರೀಡೂ’ ಪ್ರಕ್ರಿಯೆ ಬಗ್ಗೆ ಪರಿಶೀಲನೆ ನಡೆಸಲು ಮೂವರು ಸದಸ್ಯರ ಸಮಿತಿಯನ್ನು ಹೈಕೋರ್ಟ್‌ ನೇಮಿಸಿದೆ.

ಈ ಸಂಬಂಧ ಜಮೀನು ಮತ್ತು ಕಟ್ಟಡ ಮಾಲೀಕರಿಂದ ಸಲ್ಲಿಕೆಯಾಗಿದ್ದ 446 ಅರ್ಜಿಗಳನ್ನು ವಿಲೇವಾರಿ ಮಾಡಿದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಪೀಠ, ಈ ಆದೇಶ ನೀಡಿತು. 16 ಗ್ರಾಮಗಳಲ್ಲಿ ಬಡಾವಣೆ ನಿರ್ಮಾಣದ ಉದ್ದೇಶಕ್ಕೆ ಜಮೀನು ಸ್ವಾಧೀನಪಡಿಸಿಕೊಳ್ಳಲು ಜೂನ್ 2014ರಲ್ಲಿ ಹೊರಡಿಸಿದ ಎರಡನೇ ಅಂತಿಮ ಅಧಿಸೂಚನೆಯನ್ನು ಪೀಠ ಎತ್ತಿ ಹಿಡಿದಿದೆ.

ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಎನ್. ಕೇಶವನಾರಾಯಣ, ನಿವೃತ್ತ ಐಎಎಸ್‌ ಅಧಿಕಾರಿ ಸಂದೀಪ್ ದವೆ ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ಎನ್.ಎಸ್. ಮೇಘರಿಕ್ ಈ ಸಮಿತಿಯಲ್ಲಿದ್ದಾರೆ. ‌

ADVERTISEMENT

ರೀಡೂ ಮತ್ತು ಡಿನೋಟಿಫಿಕೇಶನ್ ಪ್ರಕ್ರಿಯೆಗಳು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಆದೇಶಗಳಿಗೆ ಅನುಸಾರವಾಗಿ ಇವೆಯೇ ಎಂಬುದನ್ನು ಈ ಸಮಿತಿ ಪರಿಶೀಲಿಸಲಿದೆ. ಈ ಸಮಿತಿ ಸಲ್ಲಿಸುವ ವರದಿ ಆಧರಿಸಿ ಮುಂದುವರಿಯುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ(ಬಿಡಿಎ) ಪೀಠ ಸೂಚಿಸಿದೆ.

2010ರ ಸುಪ್ರೀಂ ಕೋರ್ಟ್‌ ಆದೇಶದ ಬಳಿಕ 2013ರಲ್ಲಿ 285 ಎಕರೆ ಜಾಗವನ್ನು ಸ್ವಾಧೀನ ಪ್ರಕ್ರಿಯೆಯಿಂದ ಬಿಡಿಎ ಕೈಬಿಟ್ಟಿತ್ತು. ಸ್ವಾಧೀನಕ್ಕೆ ಉದ್ದೇಶಿಸಿದ್ದ ಜಾಗದಲ್ಲಿ ತೋಟಗಾರಿಕೆ ಭೂಮಿ, ಅಭಿವೃದ್ಧಿ ಹೊಂದಿದ ವಸತಿ ಪ್ರದೇಶಗಳು, ಕಾರ್ಖಾನೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಇವೆ ಎಂಬುದನ್ನು ಗಮನಿಸಿದ್ದ ಸುಪ್ರೀಂ ಕೋರ್ಟ್‌ ಈ ಆದೇಶ ನೀಡಿತ್ತು. ಬಳಿಕ 2014ರಲ್ಲಿ ಮಾರ್ಪಡಿಸಿದ ಆದೇಶವನ್ನು ಬಿಡಿಎ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.