ADVERTISEMENT

ಹೆಲಿಕಾಪ್ಟರ್‌ ಅವಶೇಷ ಹುಡುಕಿಕೊಟ್ಟರೂ ಸಿಗದ ಜಮೀನು: 3 ದಶಕಗಳಿಂದ ತಪ್ಪದ ಅಲೆದಾಟ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2021, 1:42 IST
Last Updated 11 ಡಿಸೆಂಬರ್ 2021, 1:42 IST
ಹೆಲಿಕಾಪ್ಟರ್‌ ಬ್ಲ್ಯಾಕ್‌ ಬಾಕ್ಸ್‌ ಹುಡುಕಿಕೊಟ್ಟಿದ್ದ ಪುಟ್ಟಸ್ವಾಮಿಗೌಡರಿಗೆ 1992ರಲ್ಲಿ ಅಂದಿನ ಉಪವಿಭಾಗಾಧಿಕಾರಿ ಅತುಲ್‌ ಕುಮಾರ್ ತಿವಾರಿ ₹ 10 ಸಾವಿರ ಬಹುಮಾನ ವಿತರಿಸಿದ್ದರು (ಸಂಗ್ರಹ ಚಿತ್ರ)
ಹೆಲಿಕಾಪ್ಟರ್‌ ಬ್ಲ್ಯಾಕ್‌ ಬಾಕ್ಸ್‌ ಹುಡುಕಿಕೊಟ್ಟಿದ್ದ ಪುಟ್ಟಸ್ವಾಮಿಗೌಡರಿಗೆ 1992ರಲ್ಲಿ ಅಂದಿನ ಉಪವಿಭಾಗಾಧಿಕಾರಿ ಅತುಲ್‌ ಕುಮಾರ್ ತಿವಾರಿ ₹ 10 ಸಾವಿರ ಬಹುಮಾನ ವಿತರಿಸಿದ್ದರು (ಸಂಗ್ರಹ ಚಿತ್ರ)   

ಹಾಸನ: ಸಕಲೇಶಪುರ ತಾಲ್ಲೂಕಿನ ಪಶ್ಚಿಮಘಟ್ಟ ವ್ಯಾಪ್ತಿಯ ಅರಮನೆ ಗುಡ್ಡ ಹಾಗೂ ಮೂರ್ಕಣ್‌ಬೆಟ್ಟದಲ್ಲಿ 1991ರ ಜುಲೈನಲ್ಲಿ ಪತನವಾಗಿದ್ದ ನೌಕದಳದ ಹೆಲಿಕಾಪ್ಟರ್‌ ಅವಶೇಷಗಳನ್ನುಹುಡುಕಿಕೊಟ್ಟಿದ್ದ ವನಗೂರಿನ ಎಚ್‌.ಆರ್‌.ಪುಟ್ಟಸ್ವಾಮಿ ಗೌಡರಿಗೆ ಬಹುಮಾನವಾಗಿ ಕೇಂದ್ರ ಸರ್ಕಾರ ನೀಡಬೇಕಿದ್ದ ಸರ್ಕಾರಿಉದ್ಯೋಗವಾಗಲೀ ಅಥವಾ ನಾಲ್ಕು ಎಕರೆ ಜಮೀನಾಗಲಿ ಮೂರು ದಶಕ ಕಳೆದರೂ ದೊರೆತಿಲ್ಲ. ಅವರ ಮನವಿಗಳು ಮೂಲೆಗುಂಪಾಗಿವೆ.

‘ಮಂಗಳೂರಿನಿಂದ ಪಯಣ ಆರಂಭಿಸಿ ಪತನಗೊಂಡಿದ್ದ ಹೆಲಿಕಾಪ್ಟರ್‌ನ‌ಲ್ಲಿದ್ದ ಕರ್ನಲ್‌ ಸೇರಿನಾಲ್ವರು ಮೃತಪಟ್ಟಿದ್ದರು. ನಂತರ, ವಾಯುಪಡೆಹಾಗೂ ನೌಕಾಪಡೆಯ ಹೆಲಿಕಾಪ್ಟರ್‌ಗಳಲ್ಲಿ 45 ಯೋಧರು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಹೆಲಿಕಾಪ್ಟರ್‌ ಹಾಗೂ ಬ್ಲ್ಯಾಕ್‌ ಬಾಕ್ಸ್‌ ಹುಡುಕಿಕೊಟ್ಟವರಿಗೆ ಬಹುಮಾನ ನೀಡುವುದಾಗಿ ಕೇಂದ್ರಸರ್ಕಾರ ಘೋಷಿಸಿದ ಬಳಿಕ ಪಶ್ಚಿಮಘಟ್ಟದಂಚಿನ ಗ್ರಾಮಗಳ ಜನರು ದಟ್ಟ ಕಾಡಿನಲ್ಲಿ ಅಲೆದಾಡಿದರೂಸುಳಿವು ಸಿಕ್ಕಿರಲಿಲ್ಲ. ಆಗ ನನಗೆ 33 ವರ್ಷ. ನಾನೂ ಸತತ ಹುಡುಕಾಡಿ 1992ರಲ್ಲಿ ಹೆಲಿಕಾಪ್ಟರ್‌ಆವಶೇಷಗಳನ್ನು ಪತ್ತೆ ಹಚ್ಚಿದ್ದೆ’ ಎಂದು ಅವರು ’ಪ್ರಜಾವಾಣಿ’ಗೆ ತಿಳಿಸಿದರು. ಈಗ ಅವರಿಗೆ 62 ವರ್ಷ.

ಸಕಲೇಶಪುರದಅಂದಿನ ಉಪವಿಭಾಗಾಧಿಕಾರಿ ಅತುಲ್ ಕುಮಾರ್‌ ತಿವಾರಿ ಅವರಿಗೆ ₹ 10 ಸಾವಿರಬಹುಮಾನವನ್ನು ನೀಡಿದ್ದರು. ಸರ್ಕಾರದಿಂದ ನಾಲ್ಕು ಎಕರೆ ಕೃಷಿ ಭೂಮಿ ಅಥವಾ ಸರ್ಕಾರಿ ಉದ್ಯೋಗಕೊಡಿಸುವುದಾಗಿ ಜಿಲ್ಲಾಡಳಿತವೂ ಭರವಸೆ ನೀಡಿತ್ತು.

ಪುಟ್ಟಸ್ವಾಮಿಗೌಡ

‘ಜೀವವನ್ನು ಪಣಕ್ಕಿಟ್ಟು ಹೆಲಿಕಾಪ್ಟರ್‌ ಆವಶೇಷ ಪತ್ತೆ ಮಾಡಿದ್ದೆ. ಸಿಕ್ಕಿದ ಸೇನೆಯ ಕಡತಗಳನ್ನು ಅಧಿಕಾರಿಗಳಿಗೆತಲುಪಿಸಿದ್ದೆ. ಅಂದು ಸನ್ಮಾನ ಮಾಡಿದ್ದು ಬಿಟ್ಟರೇಕೃಷಿ ಜಮೀನಾಗಲಿ, ಸರ್ಕಾರಿ ಉದ್ಯೋಗವಾಗಲೀ ಸಿಕ್ಕಿಲ್ಲ. ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದೇನೆ’ ಎಂದು ಅವರು ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

ಸದ್ಯ, ಆಲೂರು ತಾಲ್ಲೂಕಿನ ಸಿಂಗಾಪುರ ಗ್ರಾಮದ ಶೆಡ್‌ನಲ್ಲಿ ಪತ್ನಿ ಮತ್ತು ಮಕ್ಕಳೊಂದಿಗೆ ವಾಸವಿರುವ ಅವರು ಕಾಫಿ ತೋಟದಲ್ಲಿ ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ಮಗ ಅಂಧ. ಪತ್ನಿ ಅಪಘಾತದಲ್ಲಿ ಗಾಯಗೊಂಡು ಮನೆಯಲ್ಲಿದ್ದಾರೆ.

*

ಜಮೀನು, ನೌಕರರಿಗಾಗಿ ಕಚೇರಿಗೆ ಅಲೆದಾಡಿ ವಯಸ್ಸಾಯಿತು ಹೊರತು ಭರವಸೆ ಈಡೇರಿಸಲಿಲ್ಲ. ಸಾಯುವುದರೊಳಗೆ ಕೃಷಿಭೂಮಿ ನೀಡಿದರೆ ಜೀವನ ನಡೆಸಲುಅನುಕೂಲವಾಗುತ್ತದೆ.
–ಪುಟ್ಟಸ್ವಾಮಿಗೌಡ, ಹೆಲಿಕಾಪ್ಟರ್‌ ಅವಶೇಷ ಹುಡುಕಿಕಕೊಟ್ಟವರು

*

ಪುಟ್ಟಸ್ವಾಮಿ ಗೌಡ ಅವರು ಕೇಳಿರುವ ಕೃಷಿ ಜಮೀನು ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿದೆ. ಹಾಗಾಗಿ ಸಂಬಂಧಪಟ್ಟ ಕಡತಗಳನ್ನು ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಲಾಗಿದೆ.
–ಜಯಕುಮಾರ್‌, ತಹಶೀಲ್ದಾರ್‌, ಸಕಲೇಶಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.