ADVERTISEMENT

ಬಿಬಿಎಂಪಿ ಅಧಿಕಾರ ಕಸಿಯಲು ಬಿಜೆಪಿ ಹುನ್ನಾರ: ಎಎಪಿ ಆರೋಪ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2020, 16:02 IST
Last Updated 11 ಡಿಸೆಂಬರ್ 2020, 16:02 IST
ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ, ಉಪಾಧ್ಯಕ್ಷ ಸುರೇಶ್ ರಾಥೋಡ್
ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ, ಉಪಾಧ್ಯಕ್ಷ ಸುರೇಶ್ ರಾಥೋಡ್    

ಬೆಂಗಳೂರು: ’ರಾಜ್ಯ ಸರ್ಕಾರ ತಂದಿರುವ ಬಿಬಿಎಂಪಿ ಮಸೂದೆಯು ಮಹಾನಗರ ಪಾಲಿಕೆ ಹಾಗೂ ಸ್ಥಳೀಯಸಂಸ್ಥೆಗಳ ಅಧಿಕಾರವನ್ನು ಅಡಗಿಸುವ ಹಾಗೂ ನಿಧಾನಕ್ಕೆ ಕಸಿಯುವ ಹುನ್ನಾರದಿಂದ ಕೂಡಿದೆ‘ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.

’ಅನೇಕ ದೇಶಗಳು ತಮ್ಮ ಬಜೆಟ್ಟಿನ ಶೇ 27 ರಷ್ಟು ಮೊತ್ತವನ್ನು ಮೀಸಲಿಟ್ಟು ಸ್ಥಳೀಯ ಸಂಸ್ಥೆಗಳ ಮೂಲಕ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತವೆ. ಆದರೆ, ಬಿಜೆಪಿ ಸರ್ಕಾರ ಸ್ಥಳೀಯ ಸಂಸ್ಥೆಗಳ ಅಧಿಕಾರ ಕಿತ್ತುಕೊಂಡು ಇಲ್ಲೂ ವ್ಯಾಪಕ ಲೂಟಿಗೆ ದಾರಿ ಮಾಡಿಕೊಟ್ಟಿದೆ‘ ಎಂದು ಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಮೋಹನ್ ದಾಸರಿ ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

’ಪಾಲಿಕೆ ಸದಸ್ಯರ ಆಸ್ತಿ ವಿವರವನ್ನು ಮೇಯರ್‌ಗೆ ಸಲ್ಲಿಸಬೇಕು ಎಂದು ಹೇಳಿ ಸದಸ್ಯರನ್ನು ರಕ್ಷಿಸುವ ಹುನ್ನಾರ ನಡೆಸಲಾಗಿದೆ. ಲೋಕಾಯುಕ್ತ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಆಸ್ತಿ ವಿವರವನ್ನು ಪ್ರತಿವರ್ಷ ಕಡ್ಡಾಯವಾಗಿ ಸಲ್ಲಿಸದಿದ್ದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂಬ ಅಂಶವನ್ನು ಸೇರಿಸಬೇಕು‘ ಎಂದರು.

ADVERTISEMENT

’ಶಾಸಕರ, ಸಂಸದರ ಚೇಲಾಗಳು, ಪಕ್ಷಗಳಲ್ಲಿ ಇರುವ ಅತೃಪ್ತರನ್ನು ತೃಪ್ತಿ ಪಡಿಸಲು 15 ವಲಯಗಳಾಗಿ ವಿಂಗಡಿಸಿ ವ್ಯಾಪಕ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಡಲಾಗಿದೆ. ವಲಯ ಉಸ್ತುವಾರಿಗಳಿಗೆ ಪ್ರತ್ಯೇಕ ಕಚೇರಿ, ಸಿಬ್ಬಂದಿ ಎಂದು ಹೇಳಿ ಜನರ ದುಡ್ಡನ್ನ ವ್ಯರ್ಥವಾಗಿ ಖರ್ಚು ಮಾಡಲು ಸರ್ಕಾರ ಹೊರಟಿದೆ. ವಲಯಗಳ ಸಂಖ್ಯೆಯನ್ನು 8 ಕ್ಕೆ ಇಳಿಸಬೇಕು‘ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.